ವಿಟ್ಲ : ತಂಡದಿಂದ ಯುವಕನಿಗೆ ಮಾರಣಾಂತಿಕ ಹಲ್ಲೆ

Update: 2018-09-14 16:57 GMT

ಬಂಟ್ವಾಳ, ಸೆ. 14: ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ತಂಡಯೊಂದು ಯುವಕನೋರ್ವನಿಗೆ ತಲವಾರು ಹಾಗೂ ರಾಡ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದ ಘಟನೆ ವಿಟ್ಲ ಕನ್ಯಾನದ ಕೆಳಗಿನಪೇಟೆಯಲ್ಲಿ ಶುಕ್ರವಾರ ನಡೆದಿದೆ.

ಕರೋಪಾಡಿ ಗ್ರಾಮದ ಮಿತ್ತನಡ್ಕ ನಿವಾಸಿ ಹಮೀದ್ ಎಂಬವರ ಪುತ್ರ ನವಾಫ್ (23) ಹಲ್ಲೆಗೊಳಗಾದ ಯುವಕ.

ನವಾಫ್ ಕೇರಳದಲ್ಲಿ ಉದ್ಯೋಗದಲ್ಲಿದ್ದು, ಇತ್ತೀಚೆಗೆ ಊರಿಗೆ ಮರಳಿದ್ದರು. ಕನ್ಯಾನ ಶಾಲೆಯಿಂದ ಸರ್ಟಿಫಿಕೆಟ್ ಪಡೆಯಲೆಂದು ಕನ್ಯಾನ ಪೇಟೆಗೆ ಬಂದಿದ್ದು,  ಸಂಜೆ ವೇಳೆ ತನ್ನ ದ್ವಿಚಕ್ರ ವಾಹನದಲ್ಲಿ ಕನ್ಯಾನದ ಕೆಳಗಿನಪೇಟೆಯ ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ವೇಳೆ ಕೇರಳ ಕಡೆಯಿಂದ ಕಾರಿನಲ್ಲಿ ಬಂದ ತಂಡ, ನವಾಫ್ ಮೇಲೆ ತಲವಾರ್ ಹಾಗೂ ರಾಡ್‌ನಿಂದ ದಾಳಿ ನಡೆಸಿದೆ. ಈ ಸಂದರ್ಭ ನವಾಫ್ ಓಡಲು ಯತ್ನಿಸಿದ್ದು, ಆತನನ್ನು ಬೆನ್ನಟ್ಟಿ ಹಲ್ಲೆ ನಡೆಸಿದೆ. ಬಳಿಕ ಸ್ಥಳೀಯರು ಸೇರಿದ್ದರಿಂದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಗಾಯಾಳುವನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಕನ್ಯಾನದ ಇಕ್ಕು ಯಾನೆ ಇಕ್ಬಾಲ್, ಕೇರಳದ ವಾರೆಂಟ್ ಆರೋಪಿ ಹಾರೀಸ್ ಹಾಗೂ ಕೇರಳದ ಇತರ ಇಬ್ಬರ ತಂಡ ಈ ಕೃತ್ಯ ಎಸೆಗಿದೆ ಎಂದು ಗಾಯಾಳು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಇಲ್ಲಿನ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News