ಮಂಗಳೂರು: ಕೇಂದ್ರ ಸರಕಾರದ ವಿರುದ್ಧ ಎಸ್ಡಿಪಿಐ ರ್ಯಾಲಿ
ಮಂಗಳೂರು, ಸೆ.15: ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್ಡಿಎ ಸರಕಾರದ ನೀತಿಯ ವಿರುದ್ಧ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಎಸ್ಡಿಪಿಐ ಶನಿವಾರ ನಗರದಲ್ಲಿ ರ್ಯಾಲಿ ನಡೆಸಿತು.
ಮಂಗಳೂರು ಮಿನಿ ವಿಧಾನ ಸೌಧದಿಂದ ಜಿಲ್ಲಾಧಿಕಾರಿ ಕಚೇರಿಗೆ ರ್ಯಾಲಿ ನಡೆಸಿದ ಎಸ್ಡಿಪಿಐ ಕಾರ್ಯಕರ್ತರು ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಮಾತನಾಡಿ ನರೇಂದ್ರ ಮೋದಿ ದೇಶದ ಪ್ರಧಾನಿಯಾದ ಬಳಿಕ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಲ್ಪಟ್ಟಿವೆ. ಮೋದಿಗೆ ಜನರ ಸಮಸ್ಯೆಗೆ ಕಿವಿಗೊಡುವ ಬದಲು ಹಿಂದುತ್ವವಾದಿಗಳ, ಬಂಡವಾಳಶಾಹಿಗಳ ತೃಪ್ತಿ ಪಡಿಸುವುದರಲ್ಲೇ ಖುಷಿ ಇದೆ. ತೈಲ ಮತ್ತು ಅಡುಗೆ ಅನಿಲ ದರ ಏರಿಕೆಯಿಂದ ದೇಶದ ಜನರು ತತ್ತರಿಸುತ್ತಿದ್ದರೂ ಕೂಡ ಮೋದಿಗೆ ಇದು ಸಮಸ್ಯೆಯಾಗಿ ಕಂಡಿಲ್ಲ. ಮೋದಿ ಭಕ್ತರು ಕೂಡಾ ದೇಶಕ್ಕೆ ಎದುರಾದ ಈ ಗಂಡಾಂತವನ್ನು ಸಮರ್ಥಿಸುತ್ತಿದ್ದಾರೆ. ವಾಸ್ತವ ಕಾಲ ಬುಡಕ್ಕೆ ಬಂದಾಗಲಷ್ಟೇ ಮೋದಿ ಭಕ್ತರಿಗೆ ಬುದ್ಧಿ ಬಂದೀತು ಎಂದು ಲೇವಡಿಯಾಡಿದರು.
ಎಸ್ಡಿಪಿಐ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಸುಹೈಲ್ ಖಾನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎಸ್ಡಿಪಿಐ ಮುಖಂಡರಾದ ಅಶ್ರಫ್ ಮಂಚಿ, ನೌಫಾಲ್ ಕುದ್ರೋಳಿ, ಪಿಎಫ್ಐ ಮುಖಂಡ ಅಝೀಝ್ ಮುಲ್ಕಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.