ಪ್ರೀತಿಸಿದ ಯುವತಿ ತಂದೆಯಿಂದ ಹಲ್ಲೆ: ಮನನೊಂದ ಯುವಕ ಆತ್ಮಹತ್ಯೆ

Update: 2018-09-17 16:48 GMT

ಉಡುಪಿ, ಸೆ.17: ಪ್ರೀತಿಸಿದ ಯುವತಿಯ ತಂದೆಯ ಕಿರುಕುಳ ಹಾಗೂ ಹಲ್ಲೆದ್ದಾರೆ ಎಂದು ಮಾನಸಿಕವಾಗಿ ನೊಂದ ಯುವಕನೊರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.

ಮೃತರನ್ನು ಕಲ್ಯಾಣಪುರ ನಯಂಪಳ್ಳಿಯ ಸುರೇಶ್ ಕೋಟ್ಯಾನ್ ಎಂಬವರ ಮಗ ಸೂರಜ್ ಸುವರ್ಣ (22) ಎಂದು ಗುರುತಿಸಲಾಗಿದೆ. ಸೂರಜ್ ಕಳೆದ ಒಂದು ವರ್ಷದಿಂದ ವಿರೂಪಾಕ್ಷ ಎಂಬವರ ಮಗಳನ್ನು ಪ್ರೀತಿಸುತ್ತಿದ್ದು, ಇದಕ್ಕೆ ವಿರೂಪಾಕ್ಷ ವಿರೋಧ ವ್ಯಕ್ತಪಡಿಸಿದ್ದರೆನ್ನಲಾಗಿದೆ.

ಇದೇ ವಿಚಾರದಲ್ಲಿ ವಿರೂಪಾಕ್ಷ ಸೆ.15ರಂದು ಸೂರಜ್ ಕೆಲಸ ಮಾಡುವ ಉಡುಪಿಯ ಲಯನ್ಸ್ ಸರ್ಕಲ್ ಬಳಿಯ ಅಂಗಡಿಗೆ ತೆರಳಿ, ಅವಾಚ್ಯ ಶಬ್ದ ಗಳಿಂದ ಬೈದು ಚಪ್ಪಲಿಯಿಂದ ಕೆನ್ನೆಗೆ ಹೊಡೆದಿದ್ದರೆಂದು ದೂರಲಾಗಿದೆ. ಈ ಕಿರುಕುಳ ಹಾಗೂ ಅವಮಾನದಿಂದ ಬೆಸತ್ತು ಮಾನಸಿಕವಾಗಿ ನೊಂದ ಸೂರಜ್ ಅದೇ ದಿನ ಸಂಜೆ ವೇಳೆ ಕೆಮ್ತೂರಿನ ವಿಷ್ಣಮೂರ್ತಿ ದೇವಸ್ಥಾನದ ಬಳಿ ಇಲಿ ಪಾಷಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನು.

ತೀವ್ರವಾಗಿ ಅಸ್ವಸ್ಥಗೊಂಡಿದ್ದ ಸೂರಜ್ ಸೆ.17ರಂದು ಬೆಳಗಿನ ಜಾವ 5.45ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತ ಪಟ್ಟರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News