ಬೆಳ್ತಂಗಡಿ: ರುಡ್‍ಸೆಟ್ ವಾರ್ಷಿಕ ಸಮ್ಮೇಳನದ ಉದ್ಘಾಟನಾ ಸಮಾರಂಭ

Update: 2018-09-18 15:17 GMT

ಬೆಳ್ತಂಗಡಿ, ಸೆ. 18:  ಗ್ರಾಮೀಣ ಭಾರತ ನಿಜವಾದ ಭಾರತ. ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ಕೌಶಾಲಾಭಿವೃದ್ಧಿ ಮತ್ತು ಉದ್ಯಮಶೀಲತಾಭಿವೃದ್ಧಿ ಮಾಡಿದರೆ ಮುಂದಿನ ಹತ್ತು ವರ್ಷಗಳಲ್ಲಿ ಭಾರತ ಸೂಪರ್ ಪವರ್ ಆಗಲಿದೆ. ಶ್ರಮ ಆಧಾರಿತ ಆರ್ಥಿಕ ನೀತಿಗಿಂತ ಜ್ಞಾನ ಆಧಾರಿತ ನೀತಿಯೊಂದಿಗೆ ಮಾನವ ಸಂಪನ್ಮೂಲ ಸದುಪಯೋಗ ಮಾಡಿದರೆ ದೇಶದ ಸರ್ವತೋಮುಖ ಪ್ರಗತಿ ಸಾಧ್ಯ. ಇದಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಸರ್ಕಾರದ ಕೌಶಾಲಾಭಿವೃದ್ಧಿ ಮತ್ತು ಉದ್ಯಮಶೀಲತಾಭಿವೃದ್ಧಿ ರಾಜ್ಯ ಸಚಿವ ಅನಂತ್‍ಕುಮಾರ್ ಹೆಗಡೆ ಹೇಳಿದರು.

ಅವರು ಮಂಗಳವಾರ ಧರ್ಮಸ್ಥಳದಲ್ಲಿ ಶ್ರೀ ಸನ್ನಿಧಿ ಅತಿಥಿ ಗೃಹದಲ್ಲಿ ರುಡ್‍ಸೆಟ್ ಮತ್ತು ಆರ್‍ಸೆಟಿಗಳ ನಿರ್ದೇಶಕರುಗಳ ವಾರ್ಷಿಕ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಇದೀಗ ಗ್ರಾಮೀಣ ಜನರ ಪ್ರಯೋಜನಕ್ಕೋಸ್ಕರ ಕೇಂದ್ರ ಸರಕಾರ ಸಮಾನ್ಯ ಸೇವಾ ಕೇಂದ್ರಗಳನ್ನು ತೆರೆಯುತ್ತಿದೆ. ಭಾರತೀಯ ಸಂಚಾರ ನಿಗಮ ಮತ್ತು ತಂತ್ರಜ್ಞಾನ ಇಲಾಖೆಗಳು ಜಂಟಿಯಾಗಿ ಈ ಕೇಂದ್ರಗಳನ್ನು ಸ್ಥಾಪಿಸುತ್ತಿವೆ. ನಿಗಮವು ಗ್ರಾಮೀಣ ಪ್ರದೇಶಗಳಲ್ಲಿ ದೂರವಾಣಿ, ಬ್ರ್ಯಾಂಡ್ ಸಂಪರ್ಕಗಳನ್ನು ನೀಡಿದರೆ ತಂತ್ರಜ್ಞಾನ ಇಲಾಖೆ ಯುವ ಸರಕಾರಿ ಸೇವೆಗಳನ್ನು ನೀಡಲು ಯಂತ್ರೋಪಕರಣಗಳನ್ನು ಸಿದ್ದಪಡಿಸುತ್ತದೆ. ಸರಕಾರದ 52 ಸೇವೆಗಳನ್ನು ಈ ಕೇಂದ್ರಗಳಿಂದ ನೀಡಲು ಸಾಧ್ಯವಿದೆ. ಈಗಾಗಲೇ ಕೇಂದ್ರ ಸರಕಾರವು ಒಂದು ಲಕ್ಷ ಇಂತಹ ಕೇಂದ್ರಗಳನ್ನು ಸ್ಥಾಪಿಸಿದೆ. ಈ ಕೇಂದ್ರಗಳಿಂದ ಬೇಕಾದ ಸರಕಾರಿ ದಾಖಲೆಗಳನ್ನು ತಮ್ಮ ಗ್ರಾಮದಿಂದಲೇ ಪಡೆದುಕೊಳ್ಳಬಹುದಾಗಿದೆ. ಅಲ್ಲದೆ  ತಾವು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆಯನ್ನೂ ಈ ಕೇಂದ್ರಗಳು ಒದಗಿಸಲಿವೆಹೀಗಾಗಿ ಗ್ರಾಮೀಣ ಪ್ರದೇಶಗಳು ಸುಧಾರಣೆಯಾಗದಿದ್ದರೆ ಯಾವುದೇ ಯುದ್ದವಿಮಾನಗಳನ್ನು ಉಡಾಯಿಸಿ ಪ್ರಯೋಜನವಿಲ್ಲ ಎಂದರು.

ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷಿಪ್ರ ಬೆಳವಣಿಗೆಯೊಂದಿಗೆ ಕಾಲವೂ ವೇಗವಾಗಿ ಬದಲಾಗುತ್ತಿದೆ. ಬದಲಾದ ಕಾಲದ ವಿದ್ಯಮಾನಕ್ಕೆ ಅನುಗುಣವಾಗಿ ನಮ್ಮ ಯೋಚನಾ ಲಹರಿಯನ್ನು ಬದಲಾಯಿಸಬೇಕಾದ ಅನಿವಾರ್ಯತೆ ಇದೆ. ಪ್ರತಿ ವರ್ಷ ಎರಡು ಕೋಟಿ ಯುವಜನತೆ ಉದ್ಯೋಗ ಬೇಟೆಯಲ್ಲಿರುತ್ತಾರೆ. ಅವರಿಗೆ ಅವಕಾಶ ಒದಗಿಸುವುದು ಅಗತ್ಯವಾಗಿದೆ ಎಂದರು.

ಪ್ರತಿಯೊಬ್ಬರೂ ಶ್ರಮ ಗೌರವದ ಬಗ್ಗೆ ತಿಳಿದಿರಬೇಕು. ಯಾವುದೇ ಕೆಲಸದ ಬಗ್ಗೆ ಗೌರವ, ಅಭಿಮಾನ ಹೊಂದಿರಬೇಕು. ಕೆಲಸದಲ್ಲಿ ಸಣ್ಣದು, ದೊಡ್ಡದು ಎಂಬ ಭಾವನೆ ಸಲ್ಲದು. ಮುಂದೆ ವ್ಯಕ್ತಿಯ ಕೌಶಲ ಸಾಮಾಥ್ರ್ಯ ಹೊಂದಿಕೊಂಡು ಕೇಂದ್ರ ಸರ್ಕಾರ ಕೌಶಲ ಪ್ರಮಾಣ ಪತ್ರ ನೀಡಲಿದೆ. ಯಾವುದೇ ಪದವಿ ಪಡೆದರೂ ಆತನ ಕೌಶಲಕ್ಕೆ ಆದ್ಯತೆ ನೀಡಲಾಗುತ್ತದೆ. ರುಡ್‍ಸೆಟ್ ಮತ್ತು ಆರ್‍ಸೆಟಿ ಮಾಡುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಪೂರ್ಣ ಬೆಂಬಲ ನೀಡುತ್ತದೆ ಎಂದು ಸಚಿವರು ಭರವಸೆ ನೀಡಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ರುಡ್‍ಸೆಟಿ ಅಧ್ಯಕ್ಷರೂ ಆಗಿರುವ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು, ರುಡ್‍ಸೆಟಿಯನ್ನು ಆತ್ಮವಿಶ್ವಾಸ, ಬಹಳಷ್ಟು ನಿರೀಕ್ಷೆ, ಮಹತ್ವಾಕಾಂಕ್ಷೆಗಳಿಂದ ಪ್ರಾರಂಭಿಸಲಾಗಿತ್ತು. ನಮ್ಮ ಸಾಧನೆಯನ್ನು ಕೇಂದ್ರ ಸರಕಾರ ಮೆಚ್ಚಿದೆ. ಮುಂದಿನ ದಿನಗಳಲ್ಲಿ ನಮ್ಮ ಕಾರ್ಯಶೈಲಿ ಯನ್ನು ವಿಮರ್ಶೆ ಮಾಡಿ ಮುಂದೆ ಬರುವ ಸವಾಲುಗಳಿಗೆ ಸಿದ್ಧರಾಗಲಿದ್ದೇವೆ ಎಂದರು.

ಕೌಶಲ್ಯತೆಯನ್ನು ಹೆಚ್ಚಿಸಲು ನೆರವಾಗುವಂತಹ ಅಕಾಡೆಮಿ ಸ್ಥಾಪನೆಗೆ ಈಗಾಗಲೇ ರಾಜ್ಯ ಸರಕಾರ ಬೆಂಗಳೂರಲ್ಲಿ ಉತ್ತಮಜಾಗ ನೀಡಿದೆ. ಅದರೆ ಕಟ್ಟಡ ಇನ್ನಿತರ ಸೌಕರ್ಯಗಳಿಗಾಗಿ ಅನುದಾನದ ಕೊರತೆ ಇದೆ. ಹೀಗಾಗಿ ಸಂಬಂಧಪಟ್ಟ ಬ್ಯಾಂಕುಗಳು ಹಾಗೂ ಸರಕಾರ ಕೊರತೆಯನ್ನು ನೀಗಿಸುವ ಪ್ರಯತ್ನ ಮಾಡಬೇಕು. ಆದಷ್ಟು ಶೀಘ್ರವಾಗಿ ಆದರೆ  ತರಬೇತಿಯನ್ನು ಪ್ರಾರಂಭಿಸಬಹುದಾಗಿದೆ ಎಂದರು.  

ಸಂಸದ ನಳಿನ್‍ಕುಮಾರ್ ಕಟೀಲ್ ಸಿಂಡಿಕೇಟ್ ಬ್ಯಾಂಕ್‍ಕಾರ್ಯನಿರ್ವಾಹಕ ನಿರ್ದೇಶಕ ಎಂ.ವಿ.ರಾವ್, ನಿರ್ದೇಶಕಎಸ್. ಕೃಷ್ಣನ್, ಕಾರ್ಪೋರೇಟ್‍ ಕಚೇರಿಯ ಮುಖ್ಯ ಪ್ರಬಂಧಕ ನರಸಿಂಹ ರಾವ್, ಕೆನರಾ ಬ್ಯಾಂಕ್ ಪ್ರಧಾನ ಪ್ರಬಂಧಕ ಕೆ. ಪಲನಿವೇಲು, ಮಂಗಳೂರು ವೃತ್ತಕಚೇರಿಯ ಮುಖ್ಯ ಪ್ರಬಂಧಕ ಲಕ್ಷ್ಮೀನಾರಾಯಣನ್, ಎಸ್‍ಡಿಎಂಇಟ್ರಸ್ಟ್ ಕಾರ್ಯದರ್ಶಿ ಪ್ರೊ. ಎಸ್. ಪ್ರಭಾಕರ್, ಎನ್‍ಡಿಆರ್ ಪಿ. ಸಂತೋಷ್, ರುಡ್‍ಸೆಟ್‍ ರಾಷ್ಟ್ರೀಯ ಆಕಾಡೆಮಿಯ ಸಹ ಪ್ರಬಂಧಕಆರ್. ಆರ್. ಸಿಂಗ್, ಶ್ರೀರೂಪಾ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

ರುಡ್‍ಸೆಟ್ ಕೇಂದ್ರೀಯ ಕಾರ್ಯಾಲಯದ ನಿರ್ದೇಶಕ ಎಂ. ಜನಾರ್ದನ್ ಸ್ವಾಗತಿಸಿದರು. ಗುರ್‍ಗಾಂವ್ ರುಡ್‍ಸೆಟ್ ಸಂಸ್ಥೆಯ ನಿರ್ದೇಶಕ ಒ.ಪಿ. ಗುಪ್ತಾ ಧನ್ಯವಾದವಿತ್ತರು. ಅನಸೂಯ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News