ಸೆ.22ರಂದು ತಮ್ಮಯ ಅವರಿಗೆ ಚಾವಡಿ ತಮ್ಮನ ಗೌರವ

Update: 2018-09-20 14:54 GMT

ಬಂಟ್ವಾಳ, ಸೆ. 20: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ತುಳು ವಿದ್ವಾಂಸರು, ಸಂಶೋಧಕರು, ಸಾಹಿತಿಗಳು, ಕಲಾವಿದರು, ಸಂಘಟಕರಿಗೆ ಕೊಡಮಾಡುವ "ಚಾವಡಿ ತಮ್ಮನ" ಗೌರವಕ್ಕೆ ಈ ಬಾರಿ ಹಿರಿಯ ಸಾಹಿತಿ, ತುಳು ಲಿಪಿ ಶಿಕ್ಷಕ ಬಿ.ತಮ್ಮಯ ಅವರು ಆಯ್ಕೆಯಾಗಿದ್ದಾರೆ.

ಮಂಗಳೂರು ಉರ್ವಸ್ಟೋರ್‌ನಲ್ಲಿರುವ ಅಕಾಡೆಮಿಯ ತುಳುಭವನದ "ಸಿರಿ ಚಾವಡಿಯಲ್ಲಿ" ಬಿ.ತಮ್ಮಯ ಅವರಿಗೆ "ಚಾವಡಿ ತಮ್ಮನ" ಕಾರ್ಯಕ್ರಮವು ಸೆ.22ರಂದು ಮಧ್ಯಾಹ್ನ 3:30ಕ್ಕೆ ನಡೆಯಲಿದೆ ಎಂದು ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ.ಬಿ.ಮತ್ತು ಕಾರ್ಯಕ್ರಮದ ಸದಸ್ಯ ಸಂಚಾಲಕ ಎ.ಗೋಪಾಲ ಅಂಚನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ಸನ್ಮಾನಿಸುವರು. ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಅಧ್ಯಕ್ಷತೆ ವಹಿಸುವರು. ನಿವೃತ್ತ ಮುಖ್ಯ ಶಿಕ್ಷಕ ಮಹಾಬಲೇಶ್ವರ ಟಿ.ಹೆಬ್ಬಾರ್ ಬಿ.ತಮ್ಮಯರ ಬಗ್ಗೆ ಅಭಿನಂದನಾ ಭಾಷಣ ಮಾಡುವರು.

ತಮ್ಮಯರ ಪರಿಚಯ:
ವಿದ್ಯಾರ್ಥಿ ಜೀವನದಲ್ಲೇ ನಾಟಕ, ಯಕ್ಷಗಾನ, ತಾಳಮದ್ದಳೆ ಮೊದಲಾದ ಪಠ್ಯೇತರ ಚಟುವಟಿಕೆಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಬಿ.ತಮ್ಮಯ ಅವರು ನಾನಾ ಕಡೆಗಳಲ್ಲಿ ಸಂಘಟನೆಗಳನ್ನು ಸ್ಥಾಪಿಸಿ ತುಳು ನಾಟಕಗಳನ್ನು ಬರೆದು ನಟಿಸಿ ನಿರ್ದೇಶಿಸಿ ಪ್ರದರ್ಶಿಸಿದವರು.

ಕಂದಾಯ ಇಲಾಖೆಯಲ್ಲಿ ವೃತ್ತಿ ಬದುಕಿನ ನಡುವೆಯೇ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕತಿಕ, ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯರಾಗಿ ತೊಡಗಿಸಿಕೊಂಡ ಇವರು ಬಂಟ್ವಾಳ ತಾಲೂಕು ಸರಕಾರಿ ನೌಕರರ ಸಂಘದ ಕಾರ್ಯದರ್ಶಿಯಾಗಿ- ಅಧ್ಯಕ್ಷರಾಗಿ, ಯುವವಾಹಿನಿಯ ಸಲಹೆಗಾರರಾಗಿ, ಬಂಟ್ವಾಳ ಬಿಲ್ಲವ ಸಮಾಜ ಸೇವಾ ಸಂಘದ ಕಟ್ಟಡ ಸಮಿತಿ ಉಪಾಧ್ಯಕ್ಷರಾಗಿ, ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು.

ಪ್ರಸ್ತುತ "ತುಳುವೆ" ತುಳುಲಿಪಿ ಪತ್ರಿಕೆಯ ಸಂಪಾದಕರಾಗಿ, ಬಂಟ್ವಾಳ ಪಿಂಚಣಿದಾರರ ಸಂಘದ ಅಧ್ಯಕ್ಷರಾಗಿ, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿಯಾಗಿರುವ ಇವರು ಹಣತೆ, ನಾರಾಯಣ ಗುರು ಭಜನೆ, ಚಿಂತನ ಮಂಥನ, ಹಿಂದಿರುಗಿ ನೋಡಿದಾಗ, ಕರಿಕೋಟು, ಕಾಡಿನ ಹಕ್ಕಿ ಹಾಡಿತು, ತಟಪಟ ಹನಿ, ತುಳುವೆರೆ ಪರ್ಬ, ತುಳು ಲಿಪಿ ಕಲ್ಪಿ-ತುಳು ಮೊದಲಾದ ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ.

ಹಲವಾರು ಶಾಲಾ ಕಾಲೇಜು ಮತ್ತು ಸಂಘಟನೆಗಳಲ್ಲಿ ಹಲವಾರು ವರ್ಷಗಳಿಂದ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತುಳು ಲಿಪಿ ಕಲಿಸುವ ಮೂಲಕ "ತುಳು ಮಾಸ್ತರ್" ಎನಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News