ತುಂಬೆ ಡ್ಯಾಂನಲ್ಲಿ ಮುನ್ಸೂಚನೆ ನೀಡದೆ ನೀರು ಸಂಗ್ರಹ: ರೈತಸಂಘ, ಹಸಿರುಸೇನೆ ಆಕ್ಷೇಪ

Update: 2018-09-21 13:19 GMT

ಬಂಟ್ವಾಳ, ಸೆ. 21: ಅವಧಿಗೂ ಮುಂಚಿತವಾಗಿ ಯಾವುದೇ ಮುನ್ಸೂಚನೆ ನೀಡದೆ ತುಂಬೆ ಡ್ಯಾಮ್‍ನಲ್ಲಿ ನೀರು ಸಂಗ್ರಹ ಮಾಡಿ ಜನರ ಜೀವದ ಜತೆಗೆ ಜಿಲ್ಲಾಡಳಿತ ಚೆಲ್ಲಾಟ ನಡೆಸುತ್ತಿದೆ. ಡ್ಯಾಮ್ ನೀರಿನಿಂದ ಮುಳುಗಡೆಯಾಗುವ ಪ್ರದೇಶಕ್ಕೆ ಶಾಶ್ವತ ಪರಿಹಾರವನ್ನು ನೀಡದೆ, ನೆಲ ಬಾಡಿಗೆಯನ್ನೂ ನೀಡದೆ ರೈತ ವಿರೋಧಿ ನೀತಿ ಅನುಸರಿಸಲಾಗುತ್ತಿದೆ. ಇದನ್ನು ಕೈಬಿಡದಿದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಬಂಟ್ವಾಳ ಅಧ್ಯಕ್ಷ ಎಂ. ಸುಬ್ರಹ್ಮಣ್ಯ ಭಟ್ ಎಚ್ಚರಿಸಿದ್ದಾರೆ.

ವಿಟ್ಲ ಪ್ರೆಸ್ ಕ್ಲಬ್‍ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾನ್ಯವಾಗಿ ಡಿಸೆಂಬರ್-ಜನವರಿ ತಿಂಗಳಲ್ಲಿ ಡ್ಯಾಂನಲ್ಲಿ ನೀರು ಸಂಗ್ರಹಿಸುತ್ತಿದ್ದು, ತುಂಬೆ ನೂತನ ಡ್ಯಾಂನಲ್ಲಿ ಸೆ .12ರಿಂದ ಸಾರ್ವಜನಿಕ ಪ್ರಕಟಣೆ ನೀಡದೆ, ಈ ಬಾರಿ ದಿಢೀರನೆ ನೀರು ಸಂಗ್ರಹಿಸುವ ಮೂಲಕ ಜಿಲ್ಲಾಡಳಿತ ಅನಾಗರಿಕ ವರ್ತನೆ ತೋರಿದೆ. 2016ರಲ್ಲಿ ಇದೇ ರೀತಿಯ ದುರಾವರ್ತನೆ ಜಿಲ್ಲಾಡಳಿತ ಪ್ರದರ್ಶಿಸಿದ್ದು, ರೈತರು ಸರ್ವತ್ರ ಈ ರೈತ ವಿರೋಧಿ ನೀತಿಯನ್ನು ಖಂಡಿಸಿದ್ದರು. ಜಿಲ್ಲಾಡಳಿತ ಪುನಃ ಅದೇ ನೀತಿಯನ್ನು ಅನುಸರಿಸಿ ರೈತಾಪಿ ಬರ್ಗದ ವ್ಯಾಪಕ ವಿರೋಧಕ್ಕೆ ಗುರಿಯಾಗಿದೆ ಎಂದು ತಿಳಿಸಿದರು.

2016 ಮಾ. 26ಕ್ಕೆ ಮುಳುಗಡೆ ಪ್ರದೇಶಕ್ಕೆ ಜಿಲ್ಲಾಧಿಕಾರಿ ಬಂದು ರೈತರೊಂದಿಗೆ ಮಾತುಕತೆ ಮಾಡಿ ನಿರ್ಣಯಿಸಿದ ವಿಷಯ, 2017 ಡಿ.28 ರಂದು ಸಂತ್ರಸ್ತ ರೈತರನ್ನು ಜಿಲ್ಲಾಧಿಕಾರಿ ಕಚೇರಿಗೆ ಕರೆದು ಮಾಡಿದ ನಿರ್ಣಯ, 2018ರ ಜು. 10 ರಾಜ್ಯ ಹೈಕೋರ್ಟ್ ಆದೇಶ, ಜು.20ರ ಜಿಲ್ಲಾ ಮಟ್ಟದ ರೈತರ ಕುಂದು ಕೊರತೆ ನಿವಾರಿಸುವ ಸಭೆ ಜಿಲ್ಲಾಧಿಕಾರಿ ಕಛೇರಿಯಲ್ಲಿ ಜರಗಿ ಆದ ನಿರ್ಣಯ ಇನ್ನೂ ಜಾರಿ ಆಗಿಲ್ಲ. ಪ್ರಾಯೋಗಿಕವಾಗಿ ನೀರು ನಿಲುಗಡೆ ಮಾಡುವುದಾಗಿ ಹೇಳಿ ಶಾಶ್ವತವಾಗಿ ನೀರು ನಿಲ್ಲಿಸುತ್ತಿದ್ದಾರೆ. ಕೇಂದ್ರ ಜಲ ಆಯೋಗದ ಸೂಚನೆಗಳನ್ನೂ ಪಾಲಿಸಿಲ್ಲ ಎಂದರು.

ಜಿಲ್ಲಾಡಳಿತ ರೈತರನ್ನು ಸತತವಾಗಿ ನಿರ್ಲಕ್ಷಿಸುತ್ತಿದ್ದು, ದೇಶದ ಬೆನ್ನೆಲುಬು ಅನ್ನದಾತನ 14 ವರ್ಷಗಳ ಈ ಜ್ವಲಂತ ಸಮಸ್ಯೆಯಾಗಿ ಉಳಿದಿದೆ. ರೈತರ ಸಮಕ್ಷಮದಲ್ಲಿ ಸರ್ವೆ ಮಾಡಿ ಮಾಹಿತಿ ನೀಡಿದ ಪ್ರಕಾರ ಗ್ರಾಮ ಗ್ರಾಮಕ್ಕೆ ತಾರತಮ್ಯ ಎಸಗಲಾಗುತ್ತಿದೆ. ಎಲ್ಲಾ ಪ್ರದೇಶಕ್ಕೂ ನ್ಯಾಯೋಚಿತ  ಸೂಕ್ತ ಪರಿಹಾರ ಒದಗಿಸಿ ರೈತರ ಹಿತಾಸಕ್ತಿ ಕಾಪಾಡುವಂತೆ ಆಗ್ರಹಿಸಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ಸಂಘಟನಾ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು, ಸುದೇಶ್ ಮಯ್ಯ ಪಾಣೆಮಂಗಳೂರು, ಬಂಟ್ವಾಳ ಕಾರ್ಯದರ್ಶಿ ಇದಿನಬ್ಬ ಪಾಣೆಮಂಗಳೂರು ನಂದಾವರ, ಗೌರವ ಸಲಹೆಗಾರ ಮುರುವ ಮಹಾಬಲ ಭಟ್, ವಿಟ್ಲ ಕಾರ್ಯದರ್ಶಿ ಸುದೇಶ್ ಭಂಡಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News