ವಿಟ್ಲ : ಕೋಮು ಪ್ರಚೋದನಾತ್ಮಕ ಭಾಷಣ; ಕಾಸರಗೋಡು ಹಿಂದೂ ಐಕ್ಯ ವೇದಿಕೆಯ ಮುಖಂಡನ ಬಂಧನ

Update: 2018-09-21 16:33 GMT

ಬಂಟ್ವಾಳ, ಸೆ. 21: ಇಸ್ಲಾಂ ಧರ್ಮದ ಬಗ್ಗೆ ನಿಂದನೆ ಹಾಗೂ ಕೋಮು ಪ್ರಚೋದನಾತ್ಮಕ ಭಾಷಣ ಮಾಡಿರುವ ಕಾಸರಗೋಡು ಹಿಂದೂ ಐಕ್ಯ ವೇದಿಕೆಯ ಮುಖಂಡನನ್ನು ವಿಟ್ಲ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಕಾಸರಗೋಡು ಬಿಜೆಪಿ ಪ್ರಮುಖ ರವೀಷ ತಂತ್ರಿಯವರ ಸಹವರ್ತಿ, ಕಾಸರಗೋಡ್ ಹಿಂದೂ ಐಕ್ಯ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಉಡುಪ (32) ಬಂಧಿತ ಆರೋಪಿ.

ಈತ ಘಟನೆಯ ದಿನದಿಂದ ತಲೆಮರೆಸಿಕೊಂಡಿದ್ದು, ಸೆ.19ರಂದು ನ್ಯಾಯಾಲಯದಿಂದ ಜಾಮೀನು ಪಡೆದು ಠಾಣೆಗೆ ಹಾಜರಾದವನನ್ನು ದಸ್ತಗಿರಿ ಮಾಡಲಾಗಿದೆ. ಈತನ ವಿರುದ್ಧ ಮತೀಯ ಗೂಂಡಾಶೀಟ್ ತೆರೆಯಲು ಕ್ರಮವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಬಂಟ್ವಾಳ ತಾಲೂಕು ವಿಟ್ಲ ಠಾಣಾ ವ್ಯಾಪ್ತಿಯ ಕಡಂಬು ಗ್ರಾಮದಲ್ಲಿ ಸೆ. 9ರಂದು ಶ್ರೀಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಖಾಸಗಿ ಜಾಗದಲ್ಲಿ ಏರ್ಪಡಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಕೇರಳದ ಕಾಸರಗೋಡು ಜಿಲ್ಲಾ ಹಿಂದೂ ಐಕ್ಯವೇಧಿ ಕಾರ್ಯದರ್ಶಿ ಮಂಜುನಾಥ ಉಡುಪ ಯಾನೆ ಪುಷ್ಪರಂಗ ಭಟ್ ಎಂಬಾತ ಮುಖ್ಯ ಅತಿಥಿಯಾಗಿ ಭಾಗವಹಿಸಿ, ದಿಕ್ಸೂಚಿ ಭಾಷಣದಲ್ಲಿ ಅನ್ಯಧರ್ಮದವರನ್ನು ಹೀಯಾಳಿಸಿ, ಕೋಮು ಪ್ರಚೋಧನಕಾರಿಯಾಗಿ ಭಾಷಣ ಮಾಡಿದ್ದಾನೆ. ಅಲ್ಲದೆ, ಈ ಕಾರ್ಯಕ್ರಮಕ್ಕೆ ಅನುಮತಿ ಪಡೆಯದೆ ಧ್ವನಿವರ್ಧಕವನ್ನು ಉಪಯೋಗಿಸಿದ್ದು, ಈ ಕುರಿತು ಭಾಷಣ ಮಾಡಿದ ಮಂಜುನಾಥ ಉಡುಪ, ಕಾರ್ಯಕ್ರಮದ ಸಂಘಟಕ ಚೇತನ್ ಪೆಡಿಮಲೆ, ನಿರೂಪಕ ಭಾಸ್ಕರ್ ಟೇಲರ್ ಮತ್ತು ವೇದಿಕೆ ಮೇಲೆ ಹಾಜರಿದ್ದ ಸುರೇಶ ಕೊಟ್ಟಾರಿ, ವರದರಾಜ ಕೊಟ್ಟಾರಿ, ಬಿ.ಕೆ ಕೃಷ್ಣಪ್ಪ ಸಾಲಿಯಾನ, ರಮೇಶ ಪೂಜಾರಿ ಎಂಬವರ ವಿರುದ್ಧ ಕಡಂಬು ಜುಮಾ ಮಸೀದಿಯ ಆಡಳಿತ ಸಮಿತಿ ಈ ದೂರು ನೀಡಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

ಪ್ರಕರಣ ದಾಖಲಾದ ದಿನದಿಂದ ಆರೋಪಿತರೆಲ್ಲರೂ ತಲೆ ಮರೆಸಿಕೊಂಡಿದ್ದು, ಮಂಜುನಾಥ ಉಡುಪ ಮತ್ತು ಬಿ.ಕೆ ಕೃಷ್ಣಪ್ಪ ಸಾಲಿಯಾನ ಎಂಬವರನ್ನು ಹೊರತು ಪಡಿಸಿ ಉಳಿದ ಆರೋಪಿಗಳು ಸೆ. 11ರಂದು ನ್ಯಾಯಾಲಯದಲ್ಲಿ ಜಾಮೀನು ಪಡೆದು ಠಾಣೆಗೆ ಹಾಜರಾಗಿರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅದೂರು ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲು:
ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮಂಜುನಾಥ ಉಡುಪ ಪತ್ತೆಗೆ ಕೇರಳದ ಕಾಸರಗೋಡು ಜಿಲ್ಲೆಯ ಅದೂರು ಪೊಲೀಸ್ ಠಾಣೆ ವ್ಯಾಪ್ತಿಯ ಮುಳ್ಳೇರಿಯಾ, ಗಾಡಿಗುಡ್ಡೆ, ಕುಂಟಾರು ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಈತನು ಕಣಿಯೂರು ಮಠ ಶಾಖೆ ಗಾಡಿಗುಡ್ಡೆ ಮೇಲ್ವಿಚಾರಕನಾಗಿ ಕೆಲಸ ಮಾಡಿಕೊಂಡಿದ್ದು, ಅಲ್ಲದೆ ಕಾಸರಗೋಡು ಬಿಜೆಪಿ ಪ್ರಮುಖ ರವೀಷ ತಂತ್ರಿಯವರ ಸಹವರ್ತಿಯಾಗಿರುತ್ತಾನೆ. ಮತ್ತು ಈತನ ಮೇಲೆ ಅದೂರು ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿರುತ್ತದೆ. ಈತ ಮೂಲತಃ ತುಮಕೂರು ಜಿಲ್ಲೆ ಶೆಟ್ಟಿಕೆರೆ ಗೇಟ್ ಸಿ.ಎನ್ ಹಳ್ಳಿಯವಾನಾಗಿದ್ದು, ಪ್ರಸ್ತುತ ಕಾಸರಗೋಡು ಹಿಂದೂ ಐಕ್ಯವೇದಿ ಜಿಲ್ಲಾ ಕಾರ್ಯದರ್ಶಿಯಾಗಿರುತ್ತಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇ ಗೌಡ ಅವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News