ಬೆಂಗರೆ: ಮಗುಚಿದ ನಾಡದೋಣಿ; ಓರ್ವ ಮೃತ್ಯು

Update: 2018-09-22 15:38 GMT

ಮಂಗಳೂರು, ಸೆ.22: ನಾಡದೋಣಿ ಮೀನುಗಾರಿಕೆ ನಡೆಸುತ್ತಿದ್ದ ಸಣ್ಣ ದೋಣಿಯು ಅಲೆಗಳ ಅಬ್ಬರಕ್ಕೆ ಸಿಲುಕಿ ಮಗುಚಿ ಬಿದ್ದ ಪರಿಣಾಮ ಓರ್ವ ನೀರಿಗೆ ಬಿದ್ದು ಮೃತಪಟ್ಟ ಘಟನೆ ಬೆಂಗರೆ ಸಮೀಪದ ಅಳಿವೆ ಬಾಗಿಲು ನಲ್ಲಿ ನಡೆದಿದೆ. ಈ ಬೋಟ್‌ಲ್ಲಿದ್ದ ಇನ್ನೊಬ್ಬ ಅಪಾಯದಿಂದ ಪಾರಾಗಿದ್ದಾರೆ.

ಬೆಂಗರೆ ನಿವಾಸಿ ನೌಷಾದ್ (24) ಮೃತಪಟ್ಟ ಯುವಕ. ಬೆಂಗರೆ ನಿವಾಸಿ ಅಫ್ರಿದ್ (25) ಅಪಾಯದಿಂದ ಪಾರಾದವರು.

ಶುಕ್ರವಾರ ಅಳಿವೆ ಬಾಗಿಲು ಸಮೀಪ ಚಿಕ್ಕ ಗಾತ್ರದ ನಾಡದೋಣಿಯಲ್ಲಿ ಇವರಿಬ್ಬರು ಮೀನುಗಾರಿಕೆಗೆ ನಡೆಸುತ್ತಿದ್ದರು. ಈ ಸಂದರ್ಭ ಆಳ ಸಮುದ್ರ ಮೀನುಗಾರಿಕೆಗೆ ತೆರಳುತ್ತಿದ್ದ ಬೋಟೊಂದು ಅನತಿ ದೂರದಲ್ಲಿ ಸಾಗುತ್ತಿದ್ದು, ಅದರ ರಭಸಕ್ಕೆ ಅಲೆಯೊಂದು ನಾಡದೋಣಿಗೆ ಬಡಿದ ಪರಿಣಾಮ ದೋಣಿ ಮಗುಚಿ ಬಿತ್ತು. ಈ ಸಂದರ್ಭ ನೌಷಾದ್ ಮತ್ತು ಅಫ್ರಿದ್ ನೀರಿಗೆ ಬಿದ್ದರು. ನೌಷಾದ್ ನೀರಿನಲ್ಲಿ ಮುಳುಗಿದರೆ, ಅಫ್ರಿದ್ ಪಾರಾದರು. ಇದೀಗ ನೌಷಾದ್ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಪ್ರಕರಣ ದಾಖಲಿಸಿರುವ ಪಣಂಬೂರು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News