ಧರ್ಮಸ್ಥಳದಲ್ಲಿ 20ನೇ ವರ್ಷದ ಭಜನಾ ತರಬೇತಿ ಕಮ್ಮಟ

Update: 2018-09-23 12:24 GMT

ಬೆಳ್ತಂಗಡಿ, ಸೆ.23: ಪರಿಶುದ್ಧ ಮನಸ್ಸಿನಿಂದ, ಶ್ರದ್ಧಾ-ಭಕ್ತಿಯಿಂದ ಭಗವಂತನ ಗುಣಗಾನ ಮಾಡಿ ಹಾಡುವುದರಿಂದ ನಮಗೆ ಆನಂದ ಸಿಗುತ್ತದೆ. ಭಜನೆಯಿಂದ ಸಮಾಜದ ಸಂಘಟನೆ ಆಗಬೇಕು ಎಂದು ಧಾರವಾಡದ ಮಣಕವಾಡ ಶ್ರೀ ಗುರು ಅನ್ನದಾನೀಶ್ವರ ದೇವಮಂದಿರ ಸಿದ್ಧರಾಮ ದೇವರು ಹೇಳಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಧರ್ಮಸ್ಥಳದ ಶ್ರೀ ಮಹೋತ್ಸವ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿರುವ ಇಪ್ಪತ್ತನೇ ವರ್ಷದ ಭಜನಾ ತರಬೇತಿ ಕಮ್ಮಟವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಭಜನೆ ಕಲಿತು ಇತರರಿಗೂ ಕಲಿಸಿ. ಎಂದೂ ಜಗಳ ಮಾಡಬಾರದು. ವ್ಯಕ್ತಿಯಾಗಿ ಶಿಬಿರಕ್ಕೆ ಬಂದವರು ಅಪಾರ ಶಕ್ತಿಯೊಂದಿಗೆ ಹೊರಗೆ ಹೋಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ಶ್ರದ್ಧಾ-ಭಕ್ತಿಯಿಂದ ಭಾಷಾ ಶುದ್ಧಿಯೊಂದಿಗೆ ರಾಗ, ತಾಳ, ಲಯಬದ್ಧವಾಗಿ ಭಜನೆ ಹಾಡಬೇಕು. ಯಾವುದೇ ವಿಚಾರಗಳನ್ನು ಸರಿಯಾಗಿ ತಿಳಿದುಕೊಂಡು ಆಚರಣೆ ಮಾಡಬೇಕು. ಸಂಸ್ಕೃತಿಯ ಪಲ್ಲಟದಿಂದಾಗಿ ಮೂಲ ಸ್ವರೂಪ, ತತ್ವ ಮತ್ತು ಸತ್ವಕ್ಕೆ ಧಕ್ಕೆಯಾಗಬಾರದು. ಭಜನೆ ಮೂಲಕ ಮುಕ್ತ ಹಾಗೂ ಮುಗ್ಧ ಮನಸ್ಸಿನಿಂದ ದೇವರ ಆರಾಧನೆ ಮಾಡಬೇಕು ಎಂದರು.

ಹೇಮಾವತಿ ವಿ. ಹೆಗ್ಗಡೆ ಶಿಬಿರಾರ್ಥಿಗಳಿಗೆ ಭಜನಾ ಪರಿಕರಗಳನ್ನು ವಿತರಿಸಿ ಶುಭ ಹಾರೈಸಿದರು.

ಮಾಣಿಲದ ಮೋಹನದಾಸ ಸ್ವಾಮೀಜಿ ಮಾತನಾಡಿ, ನಮ್ಮ ಮನಸ್ಸು, ಭಾವನೆ ಮತ್ತು ಕರ್ಮ ಪರಿಶುದ್ಧವಾದಾಗ ಸಾರ್ಥಕ ಜೀವನ ನಡೆಸಲು ಸಾಧ್ಯ. ಭಜನಾಪಟುಗಳು ನಾಯಕತ್ವ ಗುಣ ಬೆಳೆಸಿಕೊಂಡು ಸಮಾಜದ ದುಶ್ಚಟಗಳು ಹಾಗೂ ದೌರ್ಬಲ್ಯಗಳನ್ನು ದೂರ ಮಾಡುವ ಸಮಾಜ ಸುಧಾರಕರಾಗಬೇಕು ಎಂದರು.

ಅಕ್ಕಿ ಆಲೂರು ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶಿರಸಿಯ ಮಲ್ಲಿಕಾರ್ಜುನ ಸ್ವಾಮೀಜಿ, ಡಿ.ಹರ್ಷೇಂದ್ರ ಕುಮಾರ್, ಎಸ್.ಡಿ.ಎಂ. ಶಿಕ್ಷ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ. ಯಶೋವರ್ಮ, ಮೂಡುಬಿದಿರೆಯ ದಿನೇಶ್ ಕುಮಾರ್ ಆನಡ್ಕ ಉಪಸ್ಥಿತರಿದ್ದರು.

ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ಕಾರ್ಯದರ್ಶಿ ಮಮತಾ ರಾವ್ ವಂದಿಸಿದರು. ಶ್ರೀನಿವಾಸ ರಾವ್ ಕಾರ್ಯಕ್ರಮ ನಿರ್ವಹಿಸಿದರು.

ರಾಜ್ಯದ 12 ಜಿಲ್ಲೆಗಳಿಂದ 178 ಪುರುಷರು ಹಾಗೂ 94 ಮಹಿಳೆಯರು ಸೇರಿದಂತೆ ಒಟ್ಟು 272 ಶಿಬಿರಾರ್ಥಿಗಳು ಭಜನಾ ಕಮ್ಮಟದಲ್ಲಿ ಭಾಗವಹಿಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News