ಮಣಿಪಾಲ: ಮಾದಕ ವ್ಯಸನದ ವಿರುದ್ಧ ಜಾಗೃತಿಗಾಗಿ ಓಟ

Update: 2018-09-23 12:57 GMT

ಉಡುಪಿ, ಸೆ.23: ಉಡುಪಿ ಜಿಲ್ಲಾ ಪೊಲೀಸ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಉಡುಪಿ ಪ್ರೆಸ್ ಕ್ಲಬ್ ಮಾದಕ ವ್ಯಸನ ವಿರೋಧಿ ಮಾಸಾಚರಣೆಯ ಪ್ರಯುಕ್ತ ಮಾಹೆ ಹಾಗೂ ಮಣಿಪಾಲ ರನ್ನರ್ಸ್‌ ಕ್ಲಬ್‌ಗಳ ಸಹಯೋಗದೊಂದಿಗೆ ರವಿವಾರ ಮಣಿಪಾಲದಲ್ಲಿ ಆಯೋಜಿಸಿದ 5 ಕಿ.ಮೀ. ದೂರದ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನ ಜಾಗೃತಿ ಓಟದಲ್ಲಿ 3000ಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದರು.

ಪುಟ್ಟ, ಪುಟಾಣಿ ಮಕ್ಕಳಿಂದ ಹಿಡಿದು, ವಯೋವೃದ್ಧರವರೆಗೆ ಎಲ್ಲರೂ ಈ ಓಟದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ವಿದ್ಯಾರ್ಥಿಗಳು, ಉದ್ಯೋಗಿಗಳು, ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಎಲ್ಲರೂ ಬೆಳಗಿನ ಓಟದಲ್ಲಿ ಭಾಗಿಯಾದರು.

ಮಾಹೆ ವಿಶ್ವವಿದ್ಯಾಲಯದ ಬಳಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ, ಮಾಹೆ ವಿವಿಯ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಹಾಗೂ ಇತರ ಗಣ್ಯರು ಹಸಿರು ನಿಶಾನೆ ತೋರಿ ಓಟಕ್ಕೆ ಚಾಲನೆ ನೀಡಿದರು.

ವಿವಿ ಬಿಲ್ಡಿಂಗ್ ಎದುರಿನಿಂದ ಪ್ರಾರಂಭಗೊಂಡ ಜಾಗೃತಿ ಓಟ ಎಂ.ಕಾಪ್ಸ್, ಉಪೇಂದ್ರ ಪೈ ಸರ್ಕಲ್,ಸಿಂಡಿಕೇಟ್ ಸರ್ಕಲ್, ವೇಣುಗೋಪಾಲ ದೇವಸ್ಥಾನ, ಎಂಐಟಿ ಈಜು ಕೊಳ, ಎಂಐಟಿ, ಕಾಮತ್ ಕೆಫೆ, ಟೈಗರ್ ಸರ್ಕಲ್ ಮೂಲಕ ಮಣಿಪಾಲ್ ಎಜ್ಯು ಕಟ್ಟಡದ ಬಳಿ ಸಮಾಪನಗೊಂಡಿತು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಹೆ ವಿವಿಯ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ನಮ್ಮ ದೇಶದ ಮುಂದಿನ ಭವಿಷ್ಯವಾಗಿರುವ ಯುವಜನತೆ ಮಾದಕ ವ್ಯಸನದಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಅರಿತುಕೊಳ್ಳಬೇಕೆಂಬ ಉದ್ದೇಶದಿಂದ ಜಾಗೃತಿ ನಡಿಗೆಯನ್ನು ಆಯೋಜಿಸಿದ್ದು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಅಭಿಮಾನದ ಸಂಗತಿ ಎಂದರು.

ವ್ಯಸನ ಮುಕ್ತ ಸಮಾಜ ನಿರ್ಮಾಣದತ್ತ ಮಣಿಪಾಲ ಸಂಸ್ಥೆಗಳು ಸದಾ ತಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತಿದ್ದು, ಮುಂದೆಯೂ ಇಂತಹ ಜಾಗೃತಿ ಕಾರ್ಯಕ್ರಮಗಳಿಗೆ ಸದಾ ಸಹಕಾರ ನೀಡಲಿದೆ ಎಂದರು.

ಜಿಲ್ಲಾ ಎಸ್ಪಿ ಲಕ್ಷ್ಮಣ್ ನಿಂಬರಗಿ ಮಾತನಾಡಿ, ಭಾರತ ಸದ್ಯ ವಿಶ್ವದಲ್ಲೇ ಅತೀ ಹೆಚ್ಚು ಯುವಜನತೆಯನ್ನು ಹೊಂದಿದ ದೇಶವಾಗಿದ್ದು, ಈದೇಶದ ಸಾಮಾಜಿಕ, ಆರ್ಥಿಕ, ರಾಜಕೀಯ ಭವಿಷ್ಯ ಯುವಜನರ ಮೇಲೆ ನಿಂತಿರುವುದರಿಂದ ಅವರಿಗೆ ಸೂಕ್ತ ಸಮಯದಲ್ಲಿ ಸರಿಯಾದ ದಾರಿಯಲ್ಲಿ ಸಾಗಲು ಮಾರ್ಗದರ್ಶನ ಮಾಡಿಕೊಡಬೇಕಾಗಿದೆ ಎಂದರು.

ಮಾದಕ ವ್ಯಸನ ಮುಕ್ತ ಅಭಿಯಾನದ ಅಂಗವಾಗಿ ಕಳೆದೆರಡು ತಿಂಗಳಲ್ಲಿ ಜಿಲ್ಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪೊಲೀಸರು ಮಾದಕ ವ್ಯಸನಿಗಳನ್ನು ಬಂಧಿಸಿ ಶಿಕ್ಷೆ ನೀಡುವ ಮೂಲಕ ಮಾದಕ ವ್ಯಸನವನ್ನು ತಡೆಗಟ್ಟಬಹುದು ಎಂಬ ಭಾವನೆ ಹಲವರಲ್ಲಿದೆ. ಕೇವಲ ಪೊಲೀಸ್ ಅಥವಾ ಕಾನೂನಿನಿಂದ ಇದು ಸಾಧ್ಯವಾಗದೇ ಇರುವಾಗ ಜನಜಾಗೃತಿ ಮೂಡಿಸುವುದು ಅಗತ್ಯವಾಗುತ್ತದೆ. ಈ ಮೂಲಕ ಒಂದು ಉತ್ತಮ ಸಂದೇಶವನ್ನು ಸಮಾಜಕ್ಕೆ ತಲುಪಿಸಲು ಜಾಗೃತಿ ಅಭಿಯಾನ ಸಹಕಾರಿಯಾಗಿದೆ ಎಂದರು.

ಸಿಂಡಿಕೇಟ್ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಎಚ್. ಭಾಸ್ಕರ ಹಂದೆ, ಜಿಡಿಎಂ ಬಿ.ಆರ್. ಹಿರೇಮಠ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು, ಪ್ರೆಸ್ ಕ್ಲಬ್ ಸಂಚಾಲಕ ನಾಗರಾಜ ರಾವ್, ಕೆಎಂಸಿ ಪ್ರಾಧ್ಯಾಪಕ ಡಾ.ವಿನೋದ್ ನಾಯಕ್ ಹಾಗೂ ಇತರರು ಉಪಸ್ಥಿತರಿದ್ದರು.
 ಪೊಲೀಸರೂ ಭಾಗಿ: ಸದಾ ಬಂದೋಬಸ್ತ್, ಕಳ್ಳರು, ಆರೋಪಿಗಳು ಎಂದು ಕರ್ತವ್ಯದಲ್ಲೇ ಸದಾ ಕಾರ್ಯನಿರತರಾಗಿರುವ ಜಿಲ್ಲಾ ಎಸ್ಪಿ ಲಕ್ಷ್ಮಣ್ ನಿಂಬರಗಿ, ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಡಿವೈಎಸ್ಪಿಗಳಾದ ಕುಮಾರಸ್ವಾಮಿ, ಬೆಳ್ಳಿಯಪ್ಪ, ದಿನೇಶ್ ಕುಮಾರ್ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಇಂದು ತಮ್ಮ ಖಾಕಿ ಸಮವಸ್ತ್ರ ಕಳಚಿಟ್ಟು ಕ್ರೀಡಾ ಧಿರಿಸಿನೊಂದಿಗೆ ಓಟದಲ್ಲಿ ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News