ಕಾಳಾವರ: ಬೈಕ್ ಸವಾರನಿಗೆ ಮೃತ್ಯುವಾಗಿ ಕಾಡಿದ ಹಾವು

Update: 2018-09-23 16:46 GMT

ಕುಂದಾಪುರ, ಸೆ.23: ರಸ್ತೆ ಮಧ್ಯೆ ಹಾವೊಂದು ಕಾಣಿಸಿಕೊಂಡಿದ್ದರಿಂದ ಉಂಟಾದ ಅವಾಂತರದಲ್ಲಿ ಅಪಘಾತ ಸಂಭವಿಸಿ ಬೈಕ್ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಕೋಟೇಶ್ವರ- ಹಾಲಾಡಿ ರಸ್ತೆಯ ಕಾಳಾವರ ಗ್ರಾಮದ ರೈಲ್ವೆ ಸೇತುವೆ ಬಳಿ ರವಿವಾರ ಮಧ್ಯಾಹ್ನ ನಡೆದಿದೆ.

ಹಾಲಾಡಿ ನಿವಾಸಿ ರುದ್ರ ಆಚಾರ್ ಎಂಬವರ ಪುತ್ರ ಗಂಗಾಧರ ಆಚಾರ್(36) ಅಪಘಾತದಲ್ಲಿ ಮೃತಪಟ್ಟ ಬೈಕ್ ಸವಾರ.

ಘಟನೆ ವಿವರ: ರವಿವಾರ ಮಧ್ಯಾಹ್ನ 12:15ರ ಸುಮಾರಿಗೆ ಬಾರಕೂರು ಸಮೀಪದ ಬೆಣ್ಣೆಕುದ್ರು ನಿವಾಸಿ ಸುಧಾಕರ ಶೆಟ್ಟಿ ಎಂಬವರು ತನ್ನ ಈರ್ಟಿಗಾ ಕಾರಿನಲ್ಲಿ ಕುಂದಾಪುರ ಕಡೆಯಿಂದ ಹುಣ್ಸೆಮಕ್ಕಿ ಕಡೆಗೆ ತೆರಳುತ್ತಿದ್ದರು. ಕಾಳಾವರ ರೈಲ್ವೆ ಸೇತುವೆ ಬಳಿ ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಹಾವೊಂದು ಹಾದು ಬಂದುದರಿಂದ ಸುಧಾಕರ್ ಒಮ್ಮೆಲೆ ಕಾರಿಗೆ ಬ್ರೇಕ್ ಹಾಕಿ ನಿಲ್ಲಿಸಿದ್ದಾರೆ. ಈ ವೇಳೆ ಕಾರಿನ ಹಿಂದಿನಿಂದ ಬೈಕ್‌ನಲ್ಲಿ ಬರುತ್ತಿದ್ದ ಗಂಗಾಧರ ಆಚಾರ್, ಕಾರಿನ ಬಲಬದಿಯಿಂದ ದಾಟಿ ಮುಂದಕ್ಕೆ ಹೋಗಲು ಯತ್ನಿಸಿದ್ದಾರೆ. ಇದೇ ಸಂದರ್ಭ ಎದುರಿನಿಂದ ಅಮರೇಶ್ ಹೆಗ್ಡೆ ಎಂಬವರು ಅತಿವೇಗದಿಂದ ಚಲಾಯಿಸಿಕೊಂಡು ಬಂದ ಮಾರುತಿ ಆಲ್ಟೋ ಕಾರು ಬೈಕ್‌ಗೆ ಢಿಕ್ಕಿ ಹೊಡೆದಿದೆಯೆನ್ನಲಾಗಿದೆ. ಇದರಿಂದ ಬೈಕ್ ಸಮೇತ ರಸ್ತೆಗೆ ಬಿದ್ದ ಗಂಗಾಧರ್ ಅವರ ತಲೆಗೆ ಗಂಭೀರ ಗಾಯಗಳಾಗಿತ್ತು. ಕೂಡಲೇ ಅವರನ್ನು ಕುಂದಾಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು.

ಈ ಬಗ್ಗೆ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News