ಪಂಜಿಮೊಗರು: ನಾಪತ್ತೆಯಾಗಿದ್ದ ವೃದ್ಧನ ಮೃತದೇಹ ಪತ್ತೆ

Update: 2018-09-23 17:33 GMT

ಮಂಗಳೂರು, ಸೆ.23: ಪಂಜಿಮೊಗರು ಮಸೀದಿ ರಸ್ತೆಯ ಬೊಳ್ಳೂರು ನಿವಾಸಿ, ವೃತ್ತಿಯಲ್ಲಿ ಟ್ಯಾಕ್ಸಿ ಚಾಲಕರಾಗಿದ್ದ ಸಂಜೀವಯ್ಯ(61)ರ ಮೃತದೇಹ ರವಿವಾರ ಕೂಳೂರಿನ ಪಡುಕೋಡಿ ಗ್ರಾಮದ ಮೇಲುಕೊಪ್ಪಲು ಎಂಬಲ್ಲಿ ಫಲ್ಗುಣಿ ನದಿಯಲ್ಲಿ ಪತ್ತೆಯಾಗಿದೆ.

ಶನಿವಾರ ಬೆಳಗ್ಗೆ ಮನೆಯಿಂದ ಹೊರಟಿದ್ದ ಸಂಜೀವಯ್ಯ ರಾತ್ರಿ ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಶನಿವಾರ ಮಧ್ಯಾಹ್ನ ವಿಮಾನ ನಿಲ್ದಾಣ ಸಮೀಪ ಅವರು ಚಲಾಯಿಸುತ್ತಿದ್ದ ಕಾರು ಡಿವೈಡರ್‌ಗೆ ಢಿಕ್ಕಿ ಹೊಡೆದು ಕಾರಿನ ಮುಂಭಾಗದ ಬಂಪರ್‌ಗೆ ಹಾನಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕಾರನ್ನು ದುರಸ್ತಿಗಾಗಿ ನಂತೂರಿನ ಗ್ಯಾರೇಜ್‌ನಲ್ಲಿ ಇರಿಸಿದ್ದರು. ಆ ಬಳಿಕ ಅವರ ಮೊಬೈಲ್ ಫೋನ್ ನಾಟ್ ರೀಚೇಬಲ್ ಆಗಿದ್ದು, ರಾತ್ರಿ 1ರ ಗಂಟೆ ತನಕವೂ ಮನೆ ಮಂದಿ ಸಂಪರ್ಕಕ್ಕಾಗಿ ಪ್ರಯತ್ನಿಸಿದ್ದರು.

ರವಿವಾರ ಬೆಳಗ್ಗೆ 10 ಗಂಟೆಗೆ ಕೂಳೂರು ನದಿಯಲ್ಲಿ ಮೃತದೇಹವೊಂದು ಇರುವ ಬಗ್ಗೆ ಸ್ಥಳೀಯರು ಕಾವೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ತೆರಳಿ ಮೃತದೇಹವನ್ನು ನೀರಿನಿಂದ ಮೇಲೆತ್ತಿದ್ದರು. ಈ ನಡುವೆ ಸಂಜೀವಯ್ಯ ಅವರ ಕುಟುಂಬದವರು ಕದ್ರಿ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ದೂರು ದಾಖಲಿಸುವ ಬಗ್ಗೆ ಚಿಂತನೆ ನಡೆಸಿದ್ದರು. ಇದೇ ವೇಳೆ ಕೂಳೂರಿನಲ್ಲಿ ಅಪರಿಚಿತ ಮೃತದೇಹ ಪತ್ತೆಯಾದ ಬಗ್ಗೆ ಕದ್ರಿ ಪೊಲೀಸರಿಗೆ ಮಾಹಿತಿ ಬಂದಿತ್ತು. ಅವರು ಠಾಣೆಗೆ ಬಂದಿದ್ದ ಸಂಜೀವಯ್ಯ ಅವರ ಕುಟುಂಬದ ಸದಸ್ಯರಿಗೆ ಈ ವಿಷಯ ತಿಳಿಸಿದ್ದರು. ಬಳಿಕ ಸಂಜೀವಯ್ಯ ಕುಟುಂಬದವರು ಕೂಳೂರಿಗೆ ತೆರಳಿ ಮೃತೆದೇಹವನ್ನು ಪರಿಶೀಲಿಸಿ ಗುರುತು ಪತ್ತೆ ಹಚ್ಚಿದ್ದಾರೆ.
 

ಸಂಜೀವಯ್ಯ ಮೂಲತಃ ಕೋಲಾರ ಜಿಲ್ಲೆಯವರಾಗಿದ್ದು, ಕಳೆದ 35 ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಸಂಜೀವಯ್ಯ ಅವರ ನಿಗೂಢ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಕಾವೂರು ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News