ಯೆಯ್ಯಾಡಿ: ಹಲ್ಲೆಗೊಳಗಾದ ವ್ಯಕ್ತಿ ಸಾವು

Update: 2018-09-23 17:55 GMT

ಮಂಗಳೂರು, ಸೆ.23: ಯೆಯ್ಯಾಡಿಯಲ್ಲಿ ಗುರುವಾರ ರಾತ್ರಿ ನಡೆದ ಕೊಲೆಯತ್ನ ಪ್ರಕರಣದಲ್ಲಿ ಗಂಭೀರ ಗಾಯಗೊಂಡು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಾಲ್ದನೆಯ ಡೇನಿಯಲ್ ಫೆರ್ನಾಂಡಿಸ್ (55) ರವಿವಾರ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಕಂಕನಾಡಿ ನಗರ ಠಾಣೆಯ ಪೊಲೀಸರು ಕೊಲೆಯತ್ನ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಬದಲಾಯಿಸಿಕೊಂಡಿದ್ದಾರೆ. 

ಗುರುವಾರ ಸಂಜೆ ಕ್ಷುಲ್ಲಕ ವಿಷಯಕ್ಕೆ ಸಂಬಂಧಿಸಿ ಕಾರ್ಮಿಕರಾಗಿದ್ದ ಡೇನಿಯಲ್ ಫೆರ್ನಾಂಡಿಸ್ ಮತು ಬಾರೆಬೈಲ್‌ನ ಜಗದೀಶ್ ಶೆಟ್ಟಿ ಅವರ ಮಧ್ಯೆ ಗಲಾಟೆ ನಡೆದಿತ್ತು. ರಾತ್ರಿ ಡೇನಿಯಲ್ ಫೆರ್ನಾಂಡಿಸ್ ರಸ್ತೆ ಬದಿ ಮಲಗಿದ್ದ ವೇಳೆ ಜಗದೀಶ್ ಶೆಟ್ಟಿ ಕಲ್ಲೊಂದನ್ನು ಎತ್ತಿ ಡೇನಿಯಲ್ ಫೆರ್ನಾಂಡಿಸ್ ತಲೆಗೆ ಹಾಕಿದ್ದನೆನ್ನಲಾಗಿದೆ. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಪೊಲೀಸರು ಸ್ಥಳಕ್ಕೆ ತೆರಳಿ ಡೇನಿಯಲ್‌ರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಡೇನಿಯಲ್‌ರಿಗೆ ತೀವ್ರ ನಿಗಾ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಶನಿವಾರ ಖಾಸಗಿ ಆಸ್ಪತ್ರೆಯಿಂದ ವೆನ್ಲಾಕ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಕೊನೆಯುಸಿರೆಳೆದಿದ್ದಾರೆ.

ಕೊಲೆಯತ್ನ ಪ್ರಕರಣದ ಆರೋಪಿ ಜಗದೀಶ್ ಶೆಟ್ಟಿಯನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಶನಿವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆತನಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News