ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ ಬಿಜೆಪಿ ನಾಯಕಿ

Update: 2018-09-24 14:24 GMT

ಭೋಪಾಲ್, ಸೆ.24: ಮಧ್ಯ ಪ್ರದೇಶ ಸಮಾಜ ಕಲ್ಯಾಣ ಮಂಡಳಿ ಮುಖ್ಯಸ್ಥೆ ಪದ್ಮ ಶುಕ್ಲ ಇಂದು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ. ಶುಕ್ಲ ಅವರು 1980ರಿಂದ ಬಿಜೆಪಿ ಸದಸ್ಯೆಯಾಗಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷ ರಾಕೇಶ್ ಸಿಂಗ್ ಅವರಿಗೆ ಪತ್ರ ಬರೆದಿರುವ ಪದ್ಮ ಶುಕ್ಲ ತಮಗೆ ಪಕ್ಷದಿಂದ ನಿರಾಸೆಯುಂಟಾಗಿದೆ ಎಂದಿದ್ದಾರೆ. ``ನಾನು 1980ರಿಂದ ಪಕ್ಷದ ಪ್ರಾಥಮಿಕ ಸದಸ್ಯೆಯಾಗಿದ್ದೇನೆ ಹಾಗೂ ನನ್ನ ಕರ್ತವ್ಯಗಳನ್ನು ನಿಭಾಯಿಸುತ್ತಾ ಬಂದಿದ್ದೇನೆ. ಆದರೆ 2014ರ ಚುನಾವಣೆ ಬಳಿಕ ವಿಜಯರಾಘವಘರ್ ಕ್ಷೇತ್ರದಲ್ಲಿ ಪಕ್ಷ ಕಾರ್ಯಕರ್ತರ ಅವಗಣನೆ ಮತ್ತು  ಶೋಷಣೆಯಿಂದ ನನಗೆ ಆತಂಕವಾಗಿದೆ,'' ಎಂಬ ಕಾರಣವನ್ನು ಅವರು ತಮ್ಮ ರಾಜೀನಾಮೆಗೆ ನೀಡಿದ್ದಾರೆ.

``ನಾನು ಮಧ್ಯ ಪ್ರದೇಶ ಸಚಿವ ಸಂಜಯ್ ಪಾಠಕ್ ಜತೆ ಎರಡು ವರ್ಷ ಕೆಲಸ ಮಾಡಲು ಪ್ರಯತ್ನಿಸಿದೆ ಆದರೆ ಅದು ಅಸಾಧ್ಯವೆನಿಸಿತು. ಅವರು ಬಿಜೆಪಿ ಕಾರ್ಯಕರ್ತರನ್ನು ಅವಮಾನಿಸುತ್ತಿದ್ದರು. ಇದು ನನಗೆ ನೋವುಂಟು ಮಾಡುತ್ತಿತ್ತು ಹಾಗೂ ಕಾರ್ಯಕರ್ತರ  ಆತ್ಮಗೌರವಕ್ಕೆ ಘಾಸಿ ಮಾಡಿತ್ತು,'' ಎಂದು ಅವರು ಹೇಳಿದ್ದಾರೆ.

ಶುಕ್ಲ ಅವರು ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ಹುದ್ದೆಗೂ ರಾಜೀನಾಮೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News