ಸೂರಲ್ಪಾಡಿ ಬಳಿ ಬಸ್ ಏಜೆಂಟ್ ಮೇಲೆ ತಲವಾರು ದಾಳಿ
Update: 2018-09-24 17:58 GMT
ಮಂಗಳೂರು, ಸೆ.24: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಸೂರಲ್ಪಾಡಿ ಬಳಿ ದ್ವಿಚಕ್ರದಲ್ಲಿ ತೆರಳುತ್ತಿದ್ದ ಬಸ್ ಏಜೆಂಟ್ವೊಬ್ಬರನ್ನು ಇನ್ನೆರಡು ದ್ವಿಚಕ್ರ ವಾಹನದಲ್ಲಿ ಬಂದ ನಾಲ್ವರು ಕೊಲೆಗೆ ಯತ್ನಿಸಿದ ಘಟನೆ ಸೋಮವಾರ ರಾತ್ರಿ ಸುಮಾರು 8 ಗಂಟಗೆ ನಡೆದಿದೆ.
ದಾಳಿಗೊಳಗಾದವರನ್ನು ಪೊಳಲಿಯ ಹರೀಶ್ ಶೆಟ್ಟಿ ಎಂದು ಗುರುತಿಸಲಾಗಿದೆ. ಸರ್ವಿಸ್ ಬಸ್ ಏಜೆಂಟ್ ಆಗಿದ್ದ ಇವರು ಬಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್ ಸಂಘನೆಯ ಸ್ಥಳೀಯ ಘಟಕದ ಮುಂಚೂಣಿಯಲ್ಲಿದ್ದರು.
ಕೆಲಸ ಮುಗಿಸಿ ತನ್ನ ಮನೆಗೆ ತೆರಳುತ್ತಿದ್ದಾಗ 2 ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದ ನಾಲ್ಕು ಮಂದಿ ಯುವಕರು ತಲವಾರು ಬೀಸಿದರು ಎನ್ನಲಾಗಿದೆ. ಇದರಿಂದ ಹರೀಶ್ ಶೆಟ್ಟಿಯ ತಲೆ ಮತ್ತು ಕೈಗೆ ಗಾಯವಾಗಿದೆ. ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ನಡೆದ ಸ್ಥಳಕ್ಕೆ ಬಜ್ಪೆ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.