ಒಲಾಂಡ್ ‘ಸ್ಪಷ್ಟನೆ’ ಬಳಿಕ ರಫೇಲ್ ಒಪ್ಪಂದ ಕುರಿತು ಶಂಕೆಗೆ ಎಡೆಯಿಲ್ಲ: ರಾಜನಾಥ್ ಸಿಂಗ್
Update: 2018-09-24 16:50 GMT
ಲಕ್ನೋ, ಸೆ.24: ಫ್ರಾನ್ಸ್ನ ಮಾಜಿ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್ ಯವರ ‘ಸ್ಪಷ್ಟನೆ’ ಬಳಿಕ ರಫೇಲ್ ಒಪ್ಪಂದದ ಕುರಿತು ಯಾವುದೇ ಶಂಕೆಗೆ ಎಡೆಯಿಲ್ಲ ಎಂದು ಗೃಹಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ಇಲ್ಲಿ ಹೇಳಿದರು.
ಮುಂದಿನ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿರಿಸಿರುವ ಕಾಂಗ್ರೆಸ್ ಈ ವಿಷಯದಿಂದ ರಾಜಕೀಯ ಲಾಭಗಳಿಕೆಗೆ ಹವಣಿಸುತ್ತಿದೆ ಎಂದರು. ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು,ಪ್ರತಿಪಕ್ಷದ ಬಳಿ ಯಾವುದೇ ವಿಷಯವಿಲ್ಲ,ಹೀಗಾಗಿ ಅದು ರಫೇಲ್ ವಿಷಯವನ್ನು ಎತ್ತುತ್ತಿದೆ ಎಂದು ಹೇಳಿದರು.
ಕಾಶ್ಮೀರ ವಿಷಯ ಕುರಿತಂತೆ ಸಿಂಗ್ ಅವರು,ಆ ವಿಷಯವು ಬಗೆಹರಿಯಲಿದೆ ಎಂದು ತಾನು ಭಾವಿಸಿದ್ದೇನೆ. ಸಮಸ್ಯೆಯು ಹೆಚ್ಚುತ್ತಿಲ್ಲ. ಭಯೋತ್ಪಾದನೆಗೆ ಸಂಬಂಧಿಸಿದಂತೆ ಎಲ್ಲ ಭದ್ರತಾ ಏಜೆನ್ಸಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸುತ್ತಿವೆ. ಕಾಶ್ಮೀರದಲ್ಲಿ ಭಯೋತ್ಪಾದನೆಯು ಪಾಕಿಸ್ತಾನ ಪ್ರಾಯೋಜಿತವಾಗಿದೆ ಎಂದರು.