ಮೂಡುಬಿದಿರೆಗೆ ಮಂಗಳೂರು ಮುಡಾ ಝೋನಲ್ ರೆಗ್ಯುಲೇಶನ್ ಮನೆ ನಿರ್ಮಾಣಕ್ಕೆ ಇನ್ನು ಶೀಘ್ರ ಪರವಾನಿಗೆ ಲಭ್ಯ: ಶಾಸಕ ಕೋಟ್ಯಾನ್

Update: 2018-09-25 18:42 GMT

ಮೂಡುಬಿದಿರೆ,ಸೆ.25 : ಕಳೆದ ನಾಲ್ಕು ವರ್ಷಗಳಿಂದ ಮೂಡುಬಿದಿರೆ ನಗರ ಯೋಜನಾ ಪ್ರಾಧಿಕಾರದ ಬಿಗಿ ನಿಯಮಾವಳಿಗಳಿಂದಾಗಿ ಬಡವರಿಗೆ  ಮನೆ ಕಟ್ಟಲು ಪರವಾನಿಗೆ ದೊರೆಯದೆ ಬಹಳ ಸಮಸ್ಯೆಯಾಗುತ್ತಿರುವುದನ್ನು  ಮನಗಂಡು ಇದೀಗ ಮೂಡುಬಿದಿರೆಗೆ ಮಂಗಳೂರು ಮುಡಾ ಝೋನಲ್ ರೆಗ್ಯುಲೇಶನ್ ಅನ್ವಯಿಸಲು ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕರು ಅವಕಾಶ ಕಲ್ಪಿಸಿ ಪರವಾನಿಗೆ ಪಡೆಯಲು ನಿಯಮಗಳನ್ನು ಸರಳಗೊಳಿಸಲಾಗಿದ್ದು ಇನ್ನು ಮುಂದೆ ಮೂಡುಬಿದಿರೆಯಲ್ಲಿ ಮನೆ ನಿರ್ಮಾಣಕ್ಕೆ ಶೀಘ್ರ ಪರವಾನಿಗೆ ಲಭ್ಯವಾಗಲಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ತಿಳಿಸಿದ್ದಾರೆ. 

ಅವರು ಮೂಡುಬಿದಿರೆ ಪ್ರೆಸ್‍ಕ್ಲಬ್‍ನಲ್ಲಿ ಮಂಗಳವಾರ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾತನಾಡಿದರು. ಈ ಸಮಸ್ಯೆಯ ಬಗ್ಗೆ ಕಳೆದ ಎರಡು ತಿಂಗಳಿಂದ ಸತತ ಪ್ರಯತ್ನ ನಡೆಸಿ ಈ ಸಮಸ್ಯೆಯನ್ನು ಬಗೆಹರಿಸಲಾಗಿದೆ. 

ಮೂಡುಬಿದಿರೆ ಪುರಸಭೆಯಲ್ಲಿ  ಕಳೆದ 4 ವರ್ಷಗಳಿಂದ ಮನೆ ಕಟ್ಟಲು ಪರವಾನಿಗೆ ನೀಡದೆ, ಯಾವುದೇ ಕನ್ವರ್ಷನ್ ಸೈಟುಗಳಿಗೆ ಖಾತೆ ನೀಡದೆ ಜನರಿಗೆ ಬಹಳ ತೊಂದರೆಯಾಗಿತ್ತು. ಪುರಸಭೆಗೆ ಒಂದು ಕೋಟಿಗೂ ಮಿಕ್ಕಿ ನಷ್ಟವುಂಟಾಗಿತ್ತು. ನೋಂದಣಿ ಕಚೇರಿಯಲ್ಲಿ  ವಹಿವಾಟು ನಡೆಯದೆ, ಸರಕಾರದ ಖಜಾನೆಗೂ ಲಕ್ಷಾಂತರ ರೂ. ನಷ್ಟವುಂಟಾಗಿತ್ತು. ಕಟ್ಟಡ ನಿರ್ಮಾಣ ಕಾಮಗಾರಿಗಳೆಲ್ಲ ಬಿದ್ದು ಹೋಗಿ ಗುತ್ತಿಗೆದಾರರು, ಕಾರ್ಮಿಕರು, ದಿನಗೂಲಿ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೀಡಾಗಿದ್ದರು. ಈ ಬಗ್ಗೆ ನುರಿತ ವಕೀಲರು, ವಾಸ್ತುತಜ್ಞರೊಂದಿಗೆ ಚರ್ಚಿಸಿದಾಗ 'ಮುಡಾ' ನಿಯಮಗಳನ್ನು  ಸರಿಯಾಗಿ ಅರ್ಥಮಾಡಿಕೊಳ್ಳದೆ ತೊಂದರೆಯಾಗಿರುವುದು ತಿಳಿದುಬಂದಿತು. 

ಈ ಬಗ್ಗೆ  ತಾನು ಸೆ. 19ರಂದು ಬೆಂಗಳೂರಿನಲ್ಲಿ ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕರು, ದ.ಕ. ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ ಇರುವ ಅಧಿಕಾರಿ ಪೊನ್ನುರಾಜ್ ಇವರಿಗೆ ಮನವರಿಕೆ ಮಾಡಿದಾಗ ಅವರು ಸಮಸ್ಯೆಯ ಮೂಲವನ್ನು ತಿಳಿದುಕೊಂಡರು ಹಾಗೂ ಕೂಡಲೇ ದ.ಕ. ಜಿಲ್ಲಾಧಿಕಾರಿ ಮತ್ತು ಮೂಡುಬಿದಿರೆ ನಗರ ಯೋಜನಾ ಪ್ರಾಧಿಕಾರದ ಮುಖ್ಯಸ್ಥರಾದ ಸಹಾಯಕ ಆಯುಕ್ತರು ಹಾಗೂ ಕಾರ್ಯದರ್ಶಿಯವರಿಗೆ ಇದುವರೆಗೆ ಮೂಡಬಿದಿರೆಯಲ್ಲಿ ಅನುಸರಿಸಲಾಗುತ್ತಿರುವ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ನಿಯಮಾವಳಿಗಳ ಬದಲಾಗಿ ಮಂಗಳೂರು ಮುಡಾ ಅಳವಡಿಸಿರುವ ಝೋನಲ್ ರೆಗ್ಯುಲೇಶನ್ ಜಾರಿಗೊಳಿಸಿ, ಮನೆ ಕಟ್ಟಬಯಸುವವರಿಗೆ ಪರವಾನಿಗೆ ನೀಡಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು. ಈ ಬಗ್ಗೆ  ಈಗಾಗಲೇ ಮೂಡಬಿದಿರೆ ಪುರಸಭೆಗೂ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು. 

ಮೂಡುಬಿದಿರೆ ನಗರ ಪ್ರಾಧಿಕಾರಕ್ಕೆ ಮಾಸ್ಟರ್ ಪ್ಲಾನ್ ಮತ್ತು ಝೋನಲ್ ರೆಗ್ಯುಲೇಶನ್ ಆಗುವ ತನಕ ಇಲ್ಲಿಗೆ ಅತಿ ಸಮೀಪವೂ ಭೌಗೋಲಿಕವಾಗಿ ಸಮಾನವೂ ಆಗಿರುವ ಮಂಗಳೂರು ನಗರ ಪ್ರಾಧಿಕಾರದ  ಝೋನಲ್ ರೆಗ್ಯುಲೇಶನ್‍ನ್ನು ಮೂಡುಬಿದಿರೆ ನಗರ ಪ್ರಾಧಿಕಾರಕ್ಕೆ  ಕೂಡಲೇ  ಅಳವಡಿಸುವ ಮೂಲಕ ಇಲ್ಲಿನ ಜನತೆಯ ಸಮಸ್ಯೆಗಳಿಗೆ ಸೂಕ್ತ ಪರಿಹಾರಮಾರ್ಗ ತೋರಿರುವುದಕ್ಕಾಗಿ ಶಾಸಕರು ಎಲ್ಲ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು. 

ಪುರಸಭಾ ಸದಸ್ಯರಾದ ಪ್ರಸಾದ್ ಕುಮಾರ್, ನಾಗರಾಜ ಪೂಜಾರಿ, ಲಕ್ಷ್ಮಣ ಪೂಜಾರಿ, ದಿನೇಶ್ ಪೂಜಾರಿ, ಬಿಜೆಪಿ ಮುಖಂಡರಾದ ಮೇಘನಾದ್ ಶೆಟ್ಟಿ, ಜೋಯ್ಲಸ್ ತಾಕೋಡೆ, ಗೋಪಾಲ್ ಶೆಟ್ಟಿಗಾರ್, ರಾಜೇಶ್ ಮಲ್ಯ, ಅಶೋಕ ಮಲ್ಯ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News