ಗುಟ್ಕಾ ಉಗುಳಲು ಹೋಗಿ ಪ್ರಾಣ ಕಳೆದುಕೊಂಡ ಯುವಕ
Update: 2018-09-29 12:44 GMT
ಗ್ರೇಟರ್ ನೊಯ್ಡಾ, ಸೆ.29: ಜಾಗುವರ್ ಕಾರು ಚಲಾಯಿಸುತ್ತಿದ್ದ ಯುವಕನೊಬ್ಬ ಗುಟ್ಕಾ ಉಗುಳಲೆಂದು ಕಾರಿನ ಹೊರಗಡೆ ತಲೆ ಹಾಕುತ್ತಿದ್ದಂತೆಯೇ ಕಾರು ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ ಹೊಡೆದು ಯುವಕ ಮೃತಪಟ್ಟ ಘಟನೆ ಗ್ರೇಟರ್ ನೊಯ್ಡಾದ ಯಮುನಾ ಎಕ್ಸಪ್ರೆಸ್ ವೇಯಲ್ಲಿ ಸಂಭವಿಸಿದೆ.
ಮೃತ ಯುವಕ ಪ್ರಶಾಂತ್ ಕಸನ (27), ಗ್ರೇಟರ್ ನೊಯ್ಡಾ ನಿವಾಸಿಯಾಗಿದ್ದು ಆತನನ್ನು ಕೈಲಾಶ್ ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ಅಲ್ಲಿಂದ ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದು, ಆತ ಕೊನೆಯುಸಿರೆಳೆದಿದ್ದಾನೆ.
ಯಮುನಾ ಎಕ್ಸಪ್ರೆಸ್ ವೇ ಪಕ್ಕದಲ್ಲಿ ಅಂಗಡಿಯೊಂದನ್ನು ಹೊಂದಿದವರು ಯುವಕ ಕಾರನ್ನು ಅಪರಿಮಿತ ವೇಗದಲ್ಲಿ ಚಲಾಯಿಸುತ್ತಿದ್ದುದನ್ನು ನೋಡಿದ್ದಾಗಿ ಹೇಳುತ್ತಾರೆ. ಪಾನ್ ಮಸಾಲಾ ಉಗುಳಲು ತಲೆ ಹೊರ ಹಾಕಿದಾಗ ಅಪಘಾತ ನಡೆದಿತ್ತು ಎಂದೂ ಅವರು ವಿವರಿಸಿದ್ದಾರೆ. ಆದರೆ ಪೊಲೀಸರು ಮಾತ್ರ ತಮಗೆ ಈ ಅಪಘಾತಕ್ಕೆ ಏನು ಕಾರಣವೆಂದು ತಿಳಿದಿಲ್ಲ ಎನ್ನುತ್ತಿದ್ದಾರೆ.