ನೇರಳಕಟ್ಟೆ: ಸೆಲೂನ್ ಗೆ ನುಗ್ಗಿ ತಂಡದಿಂದ ಯುವಕನಿಗೆ ಹಲ್ಲೆ
ಬಂಟ್ವಾಳ, ಸೆ. 30: ಭಾಷಾ ವಿಚಾರಕ್ಕೆ ಸಂಬಂಧಿಸಿ ಬೈಕ್ಗಳಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಸೆಲೂನ್ ನುಗ್ಗಿ ದಾಂಧಲೆ ಗೈದು, ಯುವಕ ನೋರ್ವನಿಗೆ ಹಲ್ಲೆಗೈದು ಪರಾರಿಯಾಗಿರುವ ಘಟನೆ ಮಾಣಿ ಸಮೀಪದ ನೇರಳಕಟ್ಟೆ ಎಂಬಲ್ಲಿ ರವಿವಾರ ರಾತ್ರಿ ನಡೆದಿದೆ.
ದೆಹಲಿಯ ನಿವಾಸಿ ಮುಸೈದ್ (30) ಹಲ್ಲೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಮಾಣಿ ಸಮೀಪದ ನೇರಳಕಟ್ಟೆಯ ಕಟ್ಟಡವೊಂದರಲ್ಲಿರುವ ಸೆಲೂನ್ನಲ್ಲಿ ಮುಸೈದ್ ಕೆಲಸ ಮಾಡುತ್ತಿದ್ದು, ಇಂದು ರಾತ್ರಿ ಎರಡು ಬೈಕ್ಗಳಲ್ಲಿ ಬಂದ ಆರು ಮಂದಿ ದುಷ್ಕರ್ಮಿಗಳ ತಂಡ ಸೆಲೂನ್ಗೆ ನುಗ್ಗಿ ದಾಂಧಲೆ ನಡೆಸಿದೆ. ತದನಂತರ ಸೆಲೂನ್ನಲ್ಲಿ ಕೆಲಸ ಮಾಡುತ್ತಿದ್ದ ಮುಸೈದ್ ರಿಗೆ ಹಲ್ಲೆಗೈದು ಪರಾರಿಯಾಗಿದೆ ಎಂದು ದೂರಲಾಗಿದೆ.
ಹಲ್ಲೆಗೈದವರನ್ನು ಮಾಣಿ, ಕಲ್ಲಡ್ಕದ ನಿವಾಸಿಗಳು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಭಾಷಾ ವಿಚಾರವಾಗಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ವಿಟ್ಲ, ಬಂಟ್ವಾಳ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ.