ಕೊಡಗು-ಕೇರಳ ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ನೆರವು

Update: 2018-10-09 17:23 GMT

ಮೂಡುಬಿದಿರೆ, ಅ.9: ಕೊಡಗು ಜಿಲ್ಲೆ ಹಾಗೂ ಕೇರಳ ರಾಜ್ಯದ ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸ್ಪಂದಿಸಿದ್ದು, ಒಟ್ಟು 21 ಲಕ್ಷ ರೂ. ನೆರವನ್ನು ಸಂಸ್ಥೆಯಿಂದ ನೀಡಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಕೊಡಗು ಪ್ರಾಕೃತಿಕ ಸಂತ್ರಸ್ತರಾಗಿರುವ ಜೋಡುಪಾಲ ಮತ್ತು ಮಣ್ಣಂಗೇರಿ ಗ್ರಾಮದ ಒಟ್ಟು 97 ಕುಟುಂಬಗಳಿಗೆ ತಲಾ ರೂ. 10,000 ಹಾಗೂ ಆಳ್ವಾಸ್ ವಿದ್ಯಾರ್ಥಿನಿಯಾಗಿದ್ದು ಪ್ರಕೃತಿ ವಿಕೋಪದಲ್ಲಿ ಮನೆಯನ್ನು ಕಳೆದುಕೊಂಡಿರುವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಆಳ್ವಾಸ್‍ನ ಕ್ರೀಡಾಪಟು ತಷ್ಮಾ ಮುತ್ತಪ್ಪ ಅವರ ಕುಟುಂಬಕ್ಕೆ ಒಂದು ಲಕ್ಷದ ಚೆಕ್ ಅನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಹಾಗೂ ಆಳ್ವಾಸ್‍ನ ಕ್ರೀಡಾ ತರಬೇತುದಾರರು ಹಾಗೂ ಕ್ರೀಡಾಪಟುಗಳು ನೀಡಿದ 30,000 ರೂ. ನಗದು ಅನ್ನು ಸುಳ್ಯ ತಾಲೂಕು ಆರಂತೋಡು ಗ್ರಾಮದಲ್ಲಿ ವಿತರಿಸಲಾಯಿತು. 

ಕೊಡಗು ಸಂತ್ರಸ್ತ ಕುಟುಂಬದ, ಪ್ರಸ್ತುತ ಆಳ್ವಾಸ್‍ನಲ್ಲಿ ಅಂತಿಮ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿರುವ ದರ್ಶನ್, ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿ ಕಾವೇರಪ್ಪ ಸಿ.ಆರ್, ದ್ವಿತೀಯ ವರ್ಷದ ವರ್ಷದ ಬಿಸಿಎ ಸಂಜಯ್ ಸಿ.ಬಿ ಹಾಸ್ಟೆಲ್ ಹಾಗೂ ಊಟದ ವ್ಯವಸ್ಥೆ ಸಂಪೂರ್ಣವಾಗಿ ಉಚಿತ ನೀಡಲಾಗುತ್ತದೆ.  6ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ವ್ಯಾಸಂಗ ಮಾಡುತ್ತಿರುವ ಕೊಡಗಿನ ಆಯ್ದ 20 ವಿದ್ಯಾರ್ಥಿಗಳಿಗೆ ಕಲಿಕಾ ಉಪಕರಣ (ಸ್ಟಡಿ ಮೆಟೀರಿಯಲ್) ನೀಡಲು ವ್ಯವಸ್ಥೆ ಕಲ್ಪಿಸಿದ್ದೇವೆ. ಆರೋಗ್ಯ ಸಮಸ್ಯೆಯಿರುವ ಮೂರು ಮಂದಿ ಆಳ್ವಾಸ್ ಹೆಲ್ತ್ ಕಾರ್ಡ್ ನೀಡಲು ಉದ್ದೇಶಿಸಿದ್ದು, ಮುಂದಿನ ದಿನಗಳಲ್ಲಿ ಆಳ್ವಾಸ್‍ನಲ್ಲಿ ಉಚಿತ ಆರೋಗ್ಯ ಸೇವೆ ನೀಡಲು ತೀರ್ಮಾನಿಸಲಾಗಿದೆ.

ಕೊಡ್ಮಣ್ ಗುತ್ತು ರಾಮಚಂದ್ರ ಶೆಟ್ಟಿ ಸಂತ್ರಸ್ತರಿಗೆ ಪರಿಹಾರಧನದ ಚೆಕ್ ಅನ್ನು ವಿತರಿಸಿದರು. ಸಂಪಾಜೆ ವಲಯ ಅರಣ್ಯಾಧಿಕಾರಿ ಕ್ಷಮಾ, ಕೊಡಗು ನುಡಿಸಿರಿ ವಿರಾಸತ್ ಘಟಕದ ಅಧ್ಯಕ್ಷ ಗಿರೀಶ್ ಗಣಪತಿ, ಪದಾಧಿಕಾರಿಗಳಾದ ಕೆ.ಆರ್. ಬಾಲಕೃಷ್ಣ ರೈ, ವಿ.ಎಂ. ಕುಮಾರ್, ಉದ್ಯಮಿ ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ಆಳ್ವಾಸ್ ಸಮಾಜಕಾರ್ಯ ಸ್ನಾತಕೋತ್ತರ ವಿದ್ಯಾರ್ಥಿಗಳು ಸಂತ್ರಸ್ತರ ಮಾಹಿತಿ ಸಂಗ್ರಹಿಸಿದರು ಎಂದು ಮಾಹಿತಿ ನೀಡಿದರು. 

ಕೇರಳ ಸಂತ್ರಸ್ತರಿಗೂ ನೆರವು

ಕೇರಳದ ತಿರುವೆಲ್ಲದ ನೆರೆ ಸಂತ್ರಸ್ತ 100 ಕುಟುಂಬಕ್ಕೆ ತಲಾ 10 ಸಾವಿರ ರೂಪಾಯಿ ನೀಡಲಾಗಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಕೇರಳಕ್ಕೆ ತೆರಳಿ ಪರಿಹಾರಧನ ವಿತರಿಸಿದ್ದಾರೆ. ಆಳ್ವಾಸ್‍ನಲ್ಲಿ ದ್ವಿತೀಯ ವರ್ಷದ ಬಿ.ಎಸ್‍ಸಿ ವ್ಯಾಸಂಗ ಮಾಡುತ್ತಿರುವ ನೆರೆ ಸಂತ್ರಸ್ತ ವಿದ್ಯಾರ್ಥಿ ರಿಕ್ಕಿ ಪಿಂಟೋ ಅವರಿಗೆ ಹಾಸ್ಟೆಲ್ ಹಾಗೂ ಊಟದ ವ್ಯವಸ್ಥೆಯನ್ನು ಸಂಪೂರ್ಣ ಉಚಿತವಾಗಿ ಕಲ್ಪಿಸಲಾಗಿದೆ ಎಂದು ಡಾ.ಎಂ ಮೋಹನ ಆಳ್ವ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News