ಮತೀಯ ಅಲ್ಪಸಂಖ್ಯಾತರಿಂದ ‘ವೃತ್ತಿ ಪ್ರೋತ್ಸಾಹ ಯೋಜನೆ’ಗೆ ಅರ್ಜಿ ಆಹ್ವಾನ

Update: 2018-10-11 12:12 GMT

ಮಂಗಳೂರು/ಉಡುಪಿ, ಅ.11:ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ರಾಜ್ಯದ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಸಿಖ್ ಹಾಗೂ ಪಾರ್ಸಿ ಜನಾಂಗದವರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ವೃತ್ತಿ ಪೋತ್ಸಾಹ ಯೋಜನೆಗೆ 2018-19ನೇ ಸಾಲಿನಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹಣ್ಣು ಮತ್ತು ತರಕಾರಿ ಮಾರಾಟ ಅಂಗಡಿ, ಮಾಂಸದ ಅಂಗಡಿ, ಮೀನು ಮಾರಾಟ ಅಂಗಡಿ, ಎಳನೀರು/ಕಬ್ಬಿನ ಹಾಲು ಮಾರಾಟ ಅಂಗಡಿ, ತಂಪು ಪಾನೀಯ ಮಾರಾಟ ಅಂಗಡಿ, ಹೈನುಗಾರಿಕೆ, ಬೇಕರಿ, ಲಾಂಡ್ರಿ, ಡ್ರೈಕ್ಲೀನಿಂಗ್, ಎ.ಸಿ. ರಿಪೇರಿ, ರೆಫ್ರಿಜರೇಟರ್, ಮೋಟಾರ್ ರಿವೈಂಡಿಂಗ್ ವರ್ಕ್ಸ್, ವಾಟರ್ ವಾಷ್ ಸರ್ವಿಸ್, ಪಂಚರ್ ಶಾಪ್, ಗ್ಯಾಸ್ ವೆಲ್ಡಿಂಗ್, ಮೆಕ್ಯಾನಿಕ್, ಕಾರ್‌ಪೆಂಟ್ರಿ, ಇಲೆಕ್ಟ್ರಿಕಲ್ಸ್/ಇಲೆಕ್ಟ್ರಾನಿಕ್ಸೃ್ ವಸ್ತುಗಳ ರಿಪೇರಿ ಇತ್ಯಾದಿ ವೃತ್ತಿಗಳಿಗೆ ಅಗತ್ಯವಿರುವ ಬಂಡವಾಳಕ್ಕಾಗಿ, ಅಲ್ಪಸಂಖ್ಯಾತರು ರಾಷ್ಟ್ರೀಕೃತ ಬ್ಯಾಂಕ್/ಷೆಡ್ಯೂಲ್ ಬ್ಯಾಂಕ್/ಗ್ರಾಮೀಣ ಬ್ಯಾಂಕ್‌ಗಳಿಂದ ಪಡೆಯುವ 2 ಲಕ್ಷ ರೂ. ಸಾಲಕ್ಕೆ ನಿಗಮದಿಂದ 1 ಲಕ್ಷ ರೂ. ಸಹಾಯಧನವನ್ನು ಮಂಜೂರು ಮಾಡಲಾಗುತ್ತದೆ.

ಈ ಯೋಜನೆಯಡಿ ಅರ್ಜಿ ಸಲ್ಲಿಸುವವರು ಮತೀಯ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರಬೇಕು. ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು. ಮತೀಯ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ಕುಟುಂಬದ ವಾರ್ಷಿಕ ವರಮಾನವು ನಗರ ಪ್ರದೇಶದಲ್ಲಿ 1.03 ಲಕ್ಷ ರೂ. ಮತ್ತು ಗ್ರಾಮೀಣ ಪ್ರದೇಶದಲ್ಲಿ 81 ಸಾವಿರ ರೂ. ಮೀರಿರಬಾರದು. ವಯಸ್ಸು 18 ರಿಂದ 45 ವರ್ಷಗಳ ಮಿತಿಯಲ್ಲಿರಬೇಕು. ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಮತ್ತು ಪಡಿತರ ಚೀಟಿಯನ್ನು ಹೊಂದಿರಬೇಕು. ಐಎಫ್‌ಎಸ್‌ಸಿ ಕೋಡ್ ಹೊಂದಿರುವ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರಬೇಕು. ಕುಟುಂಬದ ಸದಸ್ಯರು ಕೇಂದ್ರ ಅಥವಾ ರಾಜ್ಯ ಸರಕಾರದ ನೌಕರಿಯಲ್ಲಿರಬಾರದು. ಅರ್ಜಿದಾರರು ಅಥವಾ ಅವರ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವುದೇ ಸಾಲ ಪಡೆದಿರಬಾರದು. ಯೋಜನಾ ವರದಿ ಸಲ್ಲಿಸಬೇಕು. ಸಾಲ ಮಂಜೂರಾತಿ ಮಾಡಿ ಬ್ಯಾಂಕ್‌ನವರು ನೀಡಿದ ಒಪ್ಪಿಗೆ ಪತ್ರ ಸಲ್ಲಿಸಬೇಕು.

ಈ ಮೇಲಿನ ನಿಬಂಧನೆಗಳೊಂದಿಗೆ ಅರ್ಹ ಅರ್ಜಿದಾರರು ಯೋಜನೆಯ ಸದುಪಯೋಗ ಪಡೆಯಲು ನಿಗದಿತ ನಮೂನೆಯ ಅರ್ಜಿ ಫಾರಂ ಭರ್ತಿ ಮಾಡಿ ನಿಗಮದ ದ.ಕ. ಜಿಲ್ಲಾ ವ್ಯವಸ್ಥಾಪಕರ ಕಚೇರಿ ಮೌಲಾನ ಆಝಾದ್ ಅಲ್ಪಸಂಖ್ಯಾತರ ಭವನ, ಓಲ್ಡ್ಕೆಂಟ್ ರಸ್ತೆ, ಪಾಂಡೇಶ್ವರ, ಮಂಗಳೂರು/ಉಡುಪಿ ದ.ಕ.ಜಿಲ್ಲಾಧಿಕಾರಿಗಳ ಕಚೇರಿ, 1ನೆ ಮಹಡಿ, ರಜತಾತ್ರಿ, ಮಣಿಪಾಲ-ಉಡುಪಿ ಈ ವಿಳಾಸಕ್ಕೆ ಪೂರಕ ದಾಖಲೆಗಳೊಂದಿಗೆ ಅ.31ರೊಳಗೆ ಸಲ್ಲಿಸುವಂತೆ ನಿಗಮದ ದ.ಕ. ಜಿಲ್ಲಾ ವ್ಯವಸ್ಥಾಪಕ ಶ್ರೀಧರ ಭಂಡಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News