ಆಡಳಿತ ವೈದ್ಯಾಧಿಕಾರಿ ಕಿರುಕುಳ ಆರೋಪ: ಬ್ರಹ್ಮಾವರ ಕಿರಿಯ ಆರೋಗ್ಯ ಸಹಾಯಕ ಆತ್ಮಹತ್ಯೆಗೆ ಯತ್ನ
ಉಡುಪಿ, ಅ.12: ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಕೇಂದ್ರದ ಕಿರಿಯ ಪುರುಷ ಆರೋಗ್ಯ ಸಹಾಯಕರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ವರದಿಯಾಗಿದೆ.
ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥಗೊಂಡಿರುವ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ವಿಠಲಪುರ ನಿವಾಸಿ, ಕಿರಿಯ ಪುರುಷ ಆರೋಗ್ಯ ಸಹಾಯಕ ನಾಗರಾಜ್ ಎಂ.ಇ. (24) ಎಂಬವರು ಮಣಿಪಾಲ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್ ಮೂರು ತಿಂಗಳ ಹಿಂದೆ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಸಹಾಯಕರಾಗಿ ನಿಯೋಜನೆಗೊಂಡಿದ್ದರು. ಆಡಳಿತ ವೈದ್ಯಾಧಿಕಾರಿ ಕಿರುಕುಳ ಆರೋಪಿಸಿ ಅವರು ಅ.10ರಂದು ಕೇಂದ್ರದ ಸಮೀಪ ಇರುವ ವಸತಿಗೃಹದಲ್ಲಿ ಮಾತ್ರೆ ಹಾಗೂ ಪಿನಾಯಿಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರೆನ್ನಲಾಗಿದೆ.
ಆದರೂ ಕರ್ತವ್ಯಕ್ಕೆ ತೆರಳಿದ್ದ ನಾಗರಾಜ್, ವೈದ್ಯಾಧಿಕಾರಿಗಳು ಮತ್ತೆ ಕಿರುಕುಳ ನೀಡಿದ್ದಾರೆಂದು ದೂರಿ ಮಾನಸಿಕವಾಗಿ ನೊಂದು ಅದೇ ದಿನ ರಾತ್ರಿ ಮತ್ತೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತೀವ್ರವಾಗಿ ಅಸ್ವಸ್ಥಗೊಂಡ ನಾಗರಾಜ್ ನನ್ನು ಮಾಹಿತಿ ತಿಳಿದ ಸಹಪಾಠಿಗಳು ಕೂಡಲೇ ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ನಾಗರಾಜ್ನನ್ನು ಅ.11ರಂದು ಮಧ್ಯಾಹ್ನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ನಾಗರಾಜ್ ಸಹೋದರ ಸಂಬಂಧಿ ಹರೀಶ್ ಪತ್ರಿಕೆಗೆ ತಿಳಿಸಿದ್ದಾರೆ.
‘ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಮಹೇಶ್ ಐತಾಳ್ ನನ್ನ ಮಗನಿಗೆ ಮಾನಸಿಕ ಹಿಂಸೆ ನೀಡುತ್ತಿದ್ದು, ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಿ ದ್ದನು. ಆದರೂ ವೈದ್ಯಾಧಿಕಾರಿ ನನ್ನ ಮಗನಿಗೆ ಹಿಂಸೆ ಮುಂದುವರೆಸಿದ್ದರು. ಈ ವಿಚಾರವನ್ನು ಮಗ ಆತ್ಮಹತ್ಯೆಗೆ ಯತ್ನಿಸಿದ ಅ.10ರಂದು ನನಗೆ ಮೊಬೈಲ್ ಕರೆ ಮಾಡಿ ತಿಳಿಸಿದ್ದನು. ಮಗ ಆತ್ಮಹತ್ಯೆ ಯತ್ನಿಸಿದರೂ ಈವರೆಗೆ ಅವನನ್ನು ವಿಚಾರಿಸಲು ಸಂಬಂಧಿಸಿದ ಯಾವುದೇ ಮೇಲಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿಲ್ಲ’ ಎಂದು ನಾಗರಾಜ್ ತಂದೆ ಈಶ್ವರಪ್ಪ ಎಂ.ಕೆ. ತಿಳಿಸಿದ್ದಾರೆ.