ಅತ್ಯಾಚಾರ ಆರೋಪಿಗಳನ್ನು ಸುಟ್ಟು ಹಾಕಿ: ಗುಜರಾತ್ ಕಾಂಗ್ರೆಸ್ ಶಾಸಕಿ !
ಅಹ್ಮದಾಬಾದ್, ಅ. 12: ಎರಡು ವಾರಗಳ ಹಿಂದೆ 14 ತಿಂಗಳ ಮಗುವಿನ ಮೇಲೆ ಅಚ್ಯಾಚಾರ ಎಸಗಿದ ಘಟನೆ ಹಿನ್ನೆಲೆಯಲ್ಲಿ ರಾಜ್ಯದ ಕಾಂಗ್ರೆಸ್ ಶಾಸಕಿ ಗೆನಿಬೆನ್ ಠಾಕೂರ್, ಅತ್ಯಾಚಾರ ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸುವ ಬದಲಾಗಿ, ಜೀವಂತ ಸುಡಬೇಕು ಎಂದಿದ್ದಾರೆ.
ಮಹಿಳೆಯ ಗುಂಪಿಗೆ ಈ ಶಾಸಕಿ ಹೀಗೆ ಹೇಳುತ್ತಿರುವ ವೀಡಿಯೊ ದೃಶ್ಯ ಗುರುವಾರ ವೈರಲ್ ಆಗಿದೆ. ಆದಾಗ್ಯೂ, ಠಾಕೂರ್ ಸಮುದಾಯದ 14 ತಿಂಗಳ ಮಗುವಿನ ಮೇಲೆ ನಡೆದ ಅತ್ಯಾಚಾರ ಘಟನೆಯಿಂದ ಆಕ್ರೋಶಿತರಾದ ಮಹಿಳೆಯರನ್ನು ಶಮನಗೊಳಿಸಲು ಈ ರೀತಿ ಹೇಳಿಕೆ ನೀಡಿರುವುದಾಗಿ ಠಾಕೂರ್ ಸ್ಪಷ್ಟನೆ ನೀಡಿದ್ದಾರೆ. ಠಾಕೂರ್ ಅವರು ಬನಸ್ಕಾಂತ್ ಜಿಲ್ಲೆಯ ವಾವ್ ಸ್ಥಾನವನ್ನು ಪ್ರತಿನಿಧಿಸುತ್ತಿದ್ದಾರೆ. ಮನೆಯ ಒಳಗಿಂದ ಮೊಬೈಲ್ನಿಂದ ಸೆರೆ ಹಿಡಿಯಲಾದ ದೃಶ್ಯಗಳಲ್ಲಿ ಶಾಸಕಿ ಪ್ರತಿಭಟನ ನಿರತ ಕೆಲವು ಮಹಿಳೆಯರಿಂದ ಸುತ್ತುವರೆದಿರುವುದು ದಾಖಲಾಗಿದೆ. ‘‘ಭಾರತದಲ್ಲಿ ಪ್ರತಿಯೊಬ್ಬರು ಕಾನೂನಿನ ಪ್ರಕ್ರಿಯೆಯನ್ನು ಎದುರಿಸಲೇ ಬೇಕು.
ಆದರೆ, ಇಂತಹ ಘಟನೆಗಳು ಸಂಭವಿಸಿದಾಗ 50-150 ಜನರು ಸಂಘಟಿತರಾಗಬೇಕು. ಅದೇ ದಿನ ಅತ್ಯಾಚಾರ ಆರೋಪಿಯನ್ನು ಸುಡಬೇಕು. ಅವರನ್ನು ಅಂತ್ಯಗೊಳಿಸಬೇಕು. ಪೊಲೀಸರಿಗೆ ಹಸ್ತಾಂತರಿಸಬಾರದು’’ ಎಂದು ಠಾಕೂರ್ ಮಹಿಳೆಯರಿಗೆ ಹೇಳುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ.