ಗಾಂಜಾ ಮಾರಾಟಕ್ಕೆ ಯತ್ನ; ಆರೋಪಿ ಸೆರೆ

Update: 2018-10-13 17:16 GMT

ಮಂಗಳೂರು, ಅ.13: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಯುವಕನನ್ನು ನಗರದ ಹೊಯಿಗೆಬಜಾರ್‌ನ ಗೂಡ್‌ಶೆಡ್ ರಸ್ತೆಬದಿ ಇಕೊನಾಮಿಕ್ ಮತ್ತು ನಾರ್ಕೊಟಿಕ್ಸ್ ಕ್ರೈಂ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಮೂಸೋಡಿ ಉಪ್ಪಳ ಗೇಟ್ ಶಾರದಾ ನಗರ ನಿವಾಸಿ ಕಿರಣ್ (24) ಬಂಧಿತ ಆರೋಪಿ. ಮಂಗಳೂರು ನಗರದಲ್ಲಿ ಇಕೊನಾಮಿಕ್ ಮತ್ತು ನಾರ್ಕೊಟಿಕ್ಸ್ ಕ್ರೈಂ ಪೊಲೀಸ್ ಠಾಣಾ ಪೊಲೀಸ್ ಇನ್‌ಸ್ಪೆಕ್ಟರ್ ಮತ್ತು ಸಿಬ್ಬಂದಿ ಮಾದಕ ದ್ರವ್ಯ ಸಾಗಾಟ/ ಮಾರಾಟ ಮಾಡುವವರ ವಿರುದ್ಧದ ಕಾರ್ಯಾಚರಣೆ ನಡೆಸಿದ್ದರು.

ಶನಿವಾರ ನಗರದ ಹೊಯಿಗೆ ಬಜಾರ್‌ನ ಗೂಡ್‌ಶೆಡ್ ರಸ್ತೆಬದಿಯಲ್ಲಿ ಆರೋಪಿ ಕಿರಣ್ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಶದಲ್ಲಿದ್ದ 30 ಸಾವಿರ ರೂ. ವೌಲ್ಯದ 1.5 ಕೆ.ಜಿ. ತೂಕದ ಗಾಂಜಾ, ಕೃತ್ಯಕ್ಕೆ ಬಳಸಿದ 60 ಸಾವಿರ ರೂ. ವೌಲ್ಯದ ಟಿವಿಎಸ್ ಜುಪಿಟರ್ ಬೈಕ್, ಮೊಬೈಲ್ ಹಾಗೂ 510 ರೂ. ನಗದನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ವೌಲ್ಯ 91,510 ರೂ. ಎಂದು ಅಂದಾಜಿಸಲಾಗಿದೆ. 

ಕಾರ್ಯಾಚರಣೆಯಲ್ಲಿ ಪೊಲೀಸ್ ನಿರೀಕ್ಷಕ ಕೆ.ಎಂ. ಶರೀಫ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News