ವಳಾಲು ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ನಿಧನ

Update: 2018-10-15 15:27 GMT

ಉಪ್ಪಿನಂಗಡಿ, ಅ. 15: ಬಜತ್ತೂರು ಗ್ರಾಮದ ವಳಾಲು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಟಿ.(49)ಯವರು ಹೃದಯಾಘಾತದಿಂದ ಸೋಮವಾರ ಬೆಳಗ್ಗೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಚಿತ್ರಾವತಿಯವರು ಅ.14ರಂದು ಸಂಜೆ ವೇಳೆ ಅನಾರೋಗ್ಯಕ್ಕೆ ಒಳಗಾಗಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡು ಮನೆಗೆ ತೆರಳಿದ್ದರು. ಅ.15ರಂದು ಬೆಳಗ್ಗೆ ಅವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮನೆಯವರು ಮತ್ತೆ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. 

ಚಿತ್ರಾವತಿ 1990ರಲ್ಲಿ ಎಟ್ಟಿಯಡ್ಕ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಸಹಶಿಕ್ಷಕರಾಗಿ ನೇಮಕಗೊಂಡಿದ್ದರು. ಆ ಬಳಿಕ ಅವರು ಮರ್ದಾಳ, ಹೊಸತೋಟ, ಬಲ್ಯ, ಹೊಸಮಜಲು ಶಾಲೆಗಳಲ್ಲಿ ಸಹಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಹೊಸಮಜಲು ಶಾಲೆಯಲ್ಲಿ ಸಹಶಿಕ್ಷಕರಾಗಿದ್ದ ವೇಳೆ ಮುಖ್ಯಶಿಕ್ಷಕರಾಗಿ ಭಡ್ತಿಗೊಂಡು 2009ರ ನವೆಂಬರ್ ತಿಂಗಳಿನಲ್ಲಿ ಬಜತ್ತೂರು ವಳಾಲು ಶಾಲೆಗೆ ವರ್ಗಾವಣೆಗೊಂಡು ಬಂದಿದ್ದರು.

ಮೃತರು ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿ ನಿವಾಸಿಯಾಗಿದ್ದು ಇವರ ಪತಿ ಸಂಜೀವ ನಾಯ್ಕ್ ಅವರು ಅರಸಿನಮಕ್ಕಿ ಗೋಪಾಲಕೃಷ್ಣ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದಾರೆ. ಮೃತರು ಪತಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News