ಇನ್ನೊಬ್ಬರ ಪ್ರಾರ್ಥನಾ ಮಂದಿರ ದ್ವಂಸಗೈದು ರಾಮಮಂದಿರ ನಿರ್ಮಿಸಲು ಒಳ್ಳೆಯ ಹಿಂದೂ ಬಯಸಲಾರ: ಶಶಿ ತರೂರ್
ಹೊಸದಿಲ್ಲಿ, ಅ.15: ಇನ್ನೊಬ್ಬರ ಪ್ರಾರ್ಥನಾ ಮಂದಿರ ದ್ವಂಸಗೈದು ರಾಮಮಂದಿರ ನಿರ್ಮಿಸಲು ಯಾವೊಬ್ಬ ಒಳ್ಳೆಯ ಹಿಂದೂ ಬಯಸುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದು, ಬಿಜೆಪಿ ಈ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಚೆನ್ನೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಅದು ರಾಮನ ಜನ್ಮಸ್ಥಳ ಎಂದು ಹೆಚ್ಚಿನ ಹಿಂದೂಗಳು ನಂಬಿದ್ದಾರೆ ಎನ್ನುವುದರ ಬಗ್ಗೆ ಓರ್ವ ಹಿಂದೂವಾಗಿ ನನಗೆ ಅರಿವಿದೆ. ಇದೇ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂದೂ ಹೆಚ್ಚಿನ ಒಳ್ಳೆಯ ಹಿಂದೂಗಳು ಬಯಸುತ್ತಾರೆ. ಆದರೆ ಮತ್ತೊಬ್ಬರ ಧಾರ್ಮಿಕ ಸ್ಥಳವನ್ನು ದ್ವಂಸಗೈದು ಅದೇ ಸ್ಥಳದಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂದು ಯಾವೊಬ್ಬ ಒಳ್ಳೆಯ ಹಿಂದೂ ಬಯಸುವುದಿಲ್ಲ ಎಂದು ನಾನು ಭಾವಿಸಿದ್ದೇನೆ” ಎಂದು ಹೇಳಿದರು.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿಯ ನಳಿನ್ ಕೊಹ್ಲಿ, “ಈ ಬಗ್ಗೆ ನಿರ್ಧರಿಸಲು ಕಾಂಗ್ರೆಸ್ ಅಥವಾ ತರೂರ್ ಯಾರು?, ಯಾರು ಒಳ್ಳೆಯ ಹಿಂದೂ, ಯಾರು ಕೆಟ್ಟ ಹಿಂದೂ ಎಂದು ತೀರ್ಮಾನಿಸಲು ಅವರು ಯಾರು?” ಎಂದು ಪ್ರಶ್ನಿಸಿದ್ದಾರೆ.