ಬಂಟ್ವಾಳ: ತಂಡದಿಂದ ಹಲ್ಲೆ ಆರೋಪ; ದೂರು ದಾಖಲು

Update: 2018-10-15 15:52 GMT

ಬಂಟ್ವಾಳ, ಅ. 15: ತಂಡವೊಂದು ಏಳು ಮಂದಿ ಯುವಕರ ಮೇಲೆ ಹಲ್ಲೆ ನಡೆಸಿದ್ದು, ಬಳಿಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲೂ ಹಲ್ಲೆಗೆ ಯತ್ನಿಸಿದ ಘಟನೆ ಬಂಟ್ವಾಳ ತಾಲೂಕಿನ ಅಮ್ಟೂರು ಎಂಬಲ್ಲಿ ರವಿವಾರ ರಾತ್ರಿ ನಡೆದಿದೆ.

ಈ ಕುರಿತು ಕರಿಂಗಾಣದ ಮನೀಷ್ ಎಂಬವರು ಬಂಟ್ವಾಳ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಘಟನೆ ಹಿನ್ನೆಲೆ

ರವಿವಾರ ರಾತ್ರಿ ಅಮ್ಟೂರಿನ ಬಾರೊಂದರ ಎದುರು ಸ್ನೇಹಿತರೊಂದಿಗೆ ಮಾತನಾಡುತ್ತಾ ನಿಂತಿದ್ದ ಸಂದರ್ಭ ಕಿರಣ್ ಎಂಬಾತ ತನ್ನ ಆಟೋದಲ್ಲಿ ಜಗದೀಶ, ಪ್ರಕಾಶ, ಮೋಹನ್, ವಿದ್ಯಾಧರ್ ಎಂಬವರೊಂದಿಗೆ ಬಂದು, ತನ್ನ ಸ್ನೇಹಿತ ಸಚಿನ್ ಎಂಬಾತನನ ಮೇಲೆ ಕೊಲೆ ಬೆದರಿಕೆಯೊಡ್ಡಿ, ಹಲ್ಲೆ ನಡೆಸಿದ್ದಾರೆ. ಇದನ್ನು ಪ್ರಶ್ನಿಸಿದ ಸಂದರ್ಭ ತನ್ನ ಮೇಲೆಯೂ ಹಲ್ಲೆ ನಡೆಸಿದ್ದಾಗಿ ಮನೀಷ್ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಅದಲ್ಲದೆ, ತನ್ನ ಸ್ನೇಹಿತರಾದ ಯೋಗೀಶ್, ಪ್ರದೀಪ್, ಪ್ರದೀಪ್ ಕಂದೂರು, ರಾಜೇಶ್, ವಸಂತ ಎಂಬವರ ಮೇಲೆಯೂ ಹಲ್ಲೆ ನಡೆಸಿದ್ದು, ಕೊಲೆ ಬೆದರಿಕೆಯೊಡ್ಡಿ ಆಟೋದಲ್ಲಿ ಪರಾರಿಯಾಗಿದ್ದಾಗಿ ಮನೀಷ್ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಬಳಿಕ ಇಂದು ಬೆಳಗ್ಗೆ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿದ ಸಂದರ್ಭ, ಅಲ್ಲಿಗೆ ಆರೋಪಿಗಳು ಆಗಮಿಸಿ ಹಲ್ಲೆಗೆ ಯತ್ನಿಸಿದ್ದಾಗಿ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News