ಅಪಘಾತ: ಮಂಡ್ಯ ಮೂಲದ ಶಿಕ್ಷಕ ಮೃತ್ಯು

Update: 2018-10-15 16:48 GMT

ಮಂಗಳೂರು, ಅ.15: ನಗರದ ನಂತೂರು ಜಂಕ್ಷನ್ ಸಮೀಪ ರವಿವಾರ ತಡರಾತ್ರಿ ಬೈಕ್ ಢಿಕ್ಕಿ ಹೊಡೆದು ಶಿಕ್ಷಕ, ಮಂಡ್ಯ ಜಿಲ್ಲ್ಲೆಯ ಬೂಕನಕೆರೆ ನಿವಾಸಿ ಶಶಿಧರ್ (44) ಮೃತಪಟ್ಟಿದ್ದಾರೆ.

ಶಶಿಧರ್ ಮತ್ತು ಇತರ ನಾಲ್ಕೈದು ಮಂದಿ ಸ್ನೇಹಿತರು ರಾತ್ರಿ 9:30ರ ವೇಳೆಗೆ ಊಟ ಮಾಡಿ ರಸ್ತೆ ಬದಿ ವಾಕಿಂಗ್ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ. ನಂತೂರಿನ ಪಾದುವಾ ಸಮೀಪ ಕರಾವಳಿ ಹೊಟೇಲ್ ಬಳಿ ಕೆಟಿಎಂ ಬೈಕ್ ಸವಾರನೊಬ್ಬ ವಾಹನವೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ತೀರಾ ಎಡಕ್ಕೆ ಚಲಾಯಿಸಿದಾಗ ಅದು ಶಶಿಧರ್ ಅವರಿಗೆ ಢಿಕ್ಕಿ ಹೊಡೆಯಿತು. ನೆಲಕ್ಕೆ ಬಿದ್ದು ತಲೆಗೆ ತೀವ್ರ ಗಾಯಗೊಂಡ ಶಶಿಧರ್ ಅವರನ್ನು ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಮಧ್ಯ ರಾತ್ರಿ 12:50ರ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು.

ಶಶಿಧರ್ ಅವರು ಮಂಡ ಜಿಲ್ಲೆಯ ಬೂಕನಕೆರೆಯ ಸರಕಾರಿ ಶಾಲೆಯ ಶಿಕ್ಷಕರಾಗಿದ್ದರು. ಅವರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ. 

ಶಶಿಧರ್ ಸಹಿತ ಮಂಡ್ಯ ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು 40 ಮಂದಿ ಶಿಕ್ಷಕರು ಮಂಗಳೂರಿನಲ್ಲಿ ಅಜೀಂ ಪ್ರೇಮ್‌ಜಿ ಫೌಂಡೇಶನ್ ಏರ್ಪಡಿಸಿದ್ದ ಕನ್ನಡ ಕಾರ್ಯಾಗಾರದಲ್ಲಿ ಭಾಗವಹಿಸಿದ್ದು, ಅವರಿಗೆ ರಾತ್ರಿ ವೇಳೆ ವಾಸ್ತವ್ಯಕ್ಕೆ ನಂತೂರು ಸಮೀಪದ ಬಜ್ಜೋಡಿಯ ಶಾಂತಿ ಕಿರಣ್‌ನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಹಾಗೆ ಅಲ್ಲಿ ವಾಸ್ತವ್ಯ ಮಾಡಿದವರ ಪೈಕಿ ಶಶಿಧರ್ ಮತ್ತು ನಾಲ್ಕೈದು ಮಂದಿ ಗೆಳೆಯರು ರಾತ್ರಿ ಊಟದ ಬಳಿಕ ವಾಕಿಂಗ್ ಹೋಗಿದ್ದರು.
ಕೆಟಿಎಂ ಬೈಕ್ ಸವಾರ ಮರ್ವಿನ್ ಜೈಕರ್ ವಿರುದ್ಧ ಮಂಗಳೂರು ನಗರ ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News