ಮಂಗಳೂರು: ಮಹಿಳೆಯ ಚಿನ್ನದ ಸರ ಕಿತ್ತು ಪರಾರಿ

Update: 2018-10-16 17:34 GMT

ಮಂಗಳೂರು, ಅ. 16: ನಗರದ ಬೋಳೂರು ಮಠದಕಣಿಯಲ್ಲಿ ಮಂಗಳವಾರ ಮಧ್ಯಾಹ್ನ ದೇವಸ್ಥಾನಕ್ಕೆ ಹೋಗಿ ಪೂಜೆ ಮುಗಿಸಿಕೊಂಡು ಹಿಂದಿರುಗುತ್ತಿದ್ದ ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಚಿನ್ನದ ಎರಡು ಸರಗಳನ್ನು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಮಠದಕಣಿ ನಾಲ್ಕನೇ ಅಡ್ಡರಸ್ತೆಯ ನಿವಾಸಿ ಜ್ಯೋತಿ (56) ಸರ ಕಳೆದುಕೊಂಡವರು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಜಾರಂದಾಯ ದೇವಸ್ಥಾನದಿಂದ ಮನೆಗೆ ಮರಳುತ್ತಿದ್ದರು. ಗೀತಾ ಎಂಬ ಇನ್ನೊಬ್ಬ ಮಹಿಳೆ ಅವರೊಂದಿಗೆ ಇದ್ದರು. ಮಠದಕಣಿ ನಾಲ್ಕನೇ ಅಡ್ಡರಸ್ತೆಯಲ್ಲಿರುವ ತಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿ ಬರುತ್ತಿದ್ದರು. ಈ ಸಂದರ್ಭ ಮೂವರು ಯುವಕರು ಬೈಕ್‌ನಲ್ಲಿ ಅಲ್ಲಿಗೆ ಬಂದಿದ್ದಾರೆ. ಬೈಕ್ ತಿರುಗಿಸಿ ನಿಲ್ಲಿಸಿ ಜ್ಯೋತಿ ಅವರ ಕುತ್ತಿಗೆಗೆ ಕೈ ಹಾಕಿ ಸರಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. 20 ಗ್ರಾಂ. ತೂಕದ ಕರಿಮಣಿ ಸರ ಮತ್ತು 16 ಗ್ರಾಂ. ತೂಕದ ಮತ್ತೊಂದು ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.  ಚಿನ್ನದ ಮೌಲ್ಯ 90 ಸಾವಿರ ರೂ. ಎಂದು ಅಂದಾಜಿಸಲಾಗಿದೆ.

ಈ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News