ಅಂಬೇಡ್ಕರ್ ಪ್ರತಿಮೆ ನಿರ್ಮಿಸಿದಾಗ ಟೀಕಿಸಿದ್ದ ಬಿಜೆಪಿ, ಆರೆಸ್ಸೆಸ್ ಕ್ಷಮೆ ಯಾಚಿಸಲಿ: ಮಾಯಾವತಿ
Update: 2018-10-31 16:38 GMT
ಲಕ್ನೋ, ಅ.31: ಉತ್ತರ ಪ್ರದೇಶದಲ್ಲಿ ದಲಿತ ನಾಯಕರ ಪ್ರತಿಮೆಗಳನ್ನು ನಿರ್ಮಿಸಿದ್ದಕ್ಕಾಗಿ ತನ್ನ ಸರಕಾರವನ್ನು ಟೀಕಿಸಿದ್ದ ಆರೆಸ್ಸೆಸ್ ಮತ್ತು ಬಿಜೆಪಿ ಕ್ಷಮೆ ಯಾಚಿಸಬೇಕು ಎಂದು ಬಿಎಸ್ಪಿ ನಾಯಕಿ ಮಾಯಾವತಿ ಆಗ್ರಹಿಸಿದ್ದಾರೆ.
2900 ಕೋಟಿ ರೂ. ವೆಚ್ಚದ ಸರ್ದಾರ್ ವಲ್ಲಭಭಾಯ್ ಪಟೇಲ್ ರ ಪ್ರತಿಮೆ ಲೋಕಾರ್ಪಣೆ ಹಿನ್ನೆಲೆಯಲ್ಲಿ ಮಾತನಾಡಿದ ಮಾಯಾವತಿ, “ಹಲವು ವರ್ಷಗಳಿಂದ ಗುಜರಾತ್ ನಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಇಷ್ಟು ವರ್ಷಗಳಾದ ಮೇಲೆ ವಲ್ಲಭಭಾಯ್ ಪ್ರತಿಮೆ ನಿರ್ಮಿಸಿದ್ದೇಕೆ” ಎಂದು ಪ್ರಶ್ನಿಸಿದರು.
“ಬಿಜೆಪಿ ಮತ್ತು ಆರೆಸ್ಸೆಸ್ ನಲ್ಲಿರುವ ಎಲ್ಲರೂ ಕ್ಷಮೆ ಯಾಚಿಸಬೇಕು. ಮುಖ್ಯವಾಗಿ ಬಹುಜನ ಸಮಾಜದ ಜನರೊಂದಿಗೆ. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಇತರ ದಲಿತ ನಾಯಕರ ಪ್ರತಿಮೆಯನ್ನು ವ್ಯರ್ಥ ಖರ್ಚು ಎಂದು ಟೀಕಿಸಿದ್ದಕ್ಕಾಗಿ ಆರೆಸ್ಸೆಸ್, ಬಿಜೆಪಿ ಕ್ಷಮೆಯಾಚಿಸಲಿ” ಎಂದವರು ಹೇಳಿದರು.