ಸೊಸೈಟಿಗೆ ಲಕ್ಷಾಂತರ ರೂ. ಹಣ ವಂಚನೆ: ದೂರು
ಕುಂದಾಪುರ, ಅ.31: ಸೌಹಾರ್ದ ಕೋಆಪರೇಟಿವ್ ಸೊಸೈಟಿಯ ಕಾರ್ಯ ನಿರ್ವಾಹಕರಾಗಿರುವ ಕೆಂಚನೂರಿನ ಶ್ರೀಧರ ಶೆಟ್ಟಿ ಎಂಬವರು ಸಂಸ್ಥೆಗೆ ಮೋಸ, ನಂಬಿಕೆ ದ್ರೋಹ ಹಾಗೂ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂ. ಹಣ ದುರುಪಯೋಗ ಮಾಡಿ ವಂಚಿಸಿರುವ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇವರು 2016-17 ಮತ್ತು 2017-18ನೆ ಸಾಲಿನ ಲೆಕ್ಕಪರಿಶೋಧನಾ ವರದಿಯನ್ನು ಸಂಬಂಧಿಸಿದ ಇಲಾಖೆಗೆ ಸಲ್ಲಿಸದೆ, ಉದ್ದೇಶಪೂರ್ವಕವಾಗಿ ಕರ್ತವ್ಯಕ್ಕೆ ಗೈರುಹಾಜರಾಗಿದ್ದು, ಠೇವಣಿದಾರರಿಂದ ಸಂಗ್ರಹಿಸಿದ ಠೇವಣಿಗಳನ್ನು ಸಹಕಾರಿ ಸಂಘದ ಖಾತೆಗೆ ಜಮಾ ಮಾಡಿರುವುದಿಲ್ಲ. ಎಫ್ಡಿ ಠೇವಣಿದಾರ ರಿಗೆ ಅಧ್ಯಕ್ಷರ ನಕಲು ಸಹಿ ಮಾಡಿ ಎಫ್ಡಿ ರಶೀದಿಯನ್ನು ನೀಡಿದ್ದಾರೆ. ಪಿಗ್ಮಿ ಸಂಗ್ರಹಕಾರರಿಂದ ಸಂಗ್ರಹಿಸಿದ ಪಿಗ್ಮಿ ಹಣವನ್ನು ಸಂಸ್ಥೆಗೆ ಜಮಾ ಮಾಡಿಲ್ಲ. ಹೀಗೆ ಅವರು ಸಂಘಕ್ಕೆ 28,55,906 ರೂ. ಹೆಚ್ಚಿನ ನಷ್ಟ ಉಂಟು ಮಾಡಿರುವುದಾಗಿ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ನೀಡಿದ ನ್ಯಾಯಾಲಯದ ಖಾಸಗಿ ದೂರಿನಂತೆ ಪ್ರಕರಣ ದಾಖಲಾಗಿದೆ.