ಮರಳು ಸಮಸ್ಯೆ ಪರಿಹರಿಸದಿದ್ದರೆ ನ.10ರಿಂದ ಉಪವಾಸ ಆಚರಣೆ: ಪೇಜಾವರ ಶ್ರೀ
ಉಡುಪಿ, ನ.1: ಉಡುಪಿ ಜಿಲ್ಲಾ ಮರಳು ಹೋರಾಟ ಸಮಿತಿಯ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳಲಾಗಿರುವ ಅನಿದಿಷ್ಟಾವಧಿ ಅಹೋರಾತ್ರಿ ಧರಣಿಯ ಎಂಟನೆ ದಿನವಾದ ಗುರುವಾರ ಪೇಜಾವರ ಹಿರಿಯ ಮಠಾಧೀಶ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಭಾಗವಹಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
‘ಅತಿಯಾದ ಮರಳುಗಾರಿಕೆ ಹಾಗೂ ಮರಳುಗಾರಿಕೆಗೆ ಪೂರ್ಣ ನಿಷೇಧ ಹೇರುವುದು ಪರಿಸರ ಹಾನಿಕರ. ಆದುದರಿಂದ ಸರಕಾರ ಯೋಗ್ಯವಾದ ನಿಯಂತ್ರ ಣದೊಂದಿಗೆ ಮರಳುಗಾರಿಕೆಗೆ ಅವಕಾಶ ಕಲ್ಪಿಸಬೇಕು. ಮರಳಿನ ಸಮಸ್ಯೆ ನ.10 ರೊಳಗೆ ಪರಿಹರಿಸದಿದ್ದರೆ ನಾನು ಉಪವಾಸ ಆಚರಣೆ ಮಾಡಲಿದ್ದೇನೆ’ ಎಂದು ಪೇಜಾವರ ಸ್ವಾಮೀಜಿ ಹೇಳಿದರು.
ಈ ಹೋರಾಟ ಸುಖಾಂತ್ಯ ಕಾಣುವಂತೆ ಪೇಜಾವರ ಸ್ವಾಮೀಜಿ ಧರಣಿಯಲ್ಲಿ 10 ನಿಮಿಷಗಳ ಕಾಲ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದರು.
ಉಡುಪಿ ಶಾಸಕ ಕೆ.ರಘುಪತಿ ಭಟ್, ಹೊಯ್ಗೆ ದೋಣಿ ಕಾರ್ಮಿಕ ಸಂಘದ ಅಧ್ಯಕ್ಷ ಸುಧಾಕರ್ ಅಮೀನ್, ಲಾರಿ ಚಾಲಕ ಹಾಗೂ ಮಾಲಕರ ಸಂಘದ ರಾಘವೇಂದ್ರ ಶೆಟ್ಟಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಮರಳಿಗಾಗಿ ಹೋರಾಟ ಸಮಿತಿಯ ಸಂಚಾಲಕ ಎಂ.ಜಿ.ನಾಗೇಂದ್ರ, ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಬಿಲ್ಡರ್ ಅಸೋಸಿಯೇಶನ್ ಅಧ್ಯಕ್ಷ ಜೆರ್ರಿ ಡಯಸ್, ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಕೃಷ್ಣರಾಜ ಕೊಡಂಚ ಮೊದಲಾದವರು ಉಪಸ್ಥಿತರಿದ್ದರು.