ಉಡುಪಿ: ರೈಲಿನಲ್ಲಿ 1.60 ಕೋ.ರೂ.ಗಿಂತ ಅಧಿಕ ಅಕ್ರಮ ನಗದು ಪತ್ತೆ; ಇಬ್ಬರ ಬಂಧನ

Update: 2018-11-02 07:18 GMT
ಸಾಂದರ್ಭಿಕ ಚಿತ್ರ

ಉಡುಪಿ, ನ.2: ಮುಂಬಯಿಯಿಂದ ಮಂಗಳೂರು ಮೂಲಕ ಕೇರಳದ ಎರ್ನಾಕುಲಂಗೆ ಸಂಚರಿಸುತ್ತಿದ್ದ ನೇತ್ರಾವತಿ ಎಕ್ಸ್‌ಪ್ರೆಸ್‌ (ನಂ.16345)ನಲ್ಲಿ ಅಕ್ರಮವಾಗಿ 1.50 ಕೋಟಿ ರೂ.ಗೂ ಅಧಿಕ ಹಣ ಸಾಗಾಟ ಮಾಡುತ್ತಿದ್ದ ರಾಜಸ್ಥಾನ ಮೂಲದ ಇಬ್ಬರನ್ನು ರೈಲ್ಪೆ ಪೊಲೀಸರು ಇಂದ್ರಾಳಿ ರೈಲ್ಪೇ ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗಿನ ಜಾವ ಬಂಧಿಸಿ, ಅವರಿಂದ ನಗದು ಸ್ವಾಧೀನಕ್ಕೆ ಪಡೆದಿದ್ದಾರೆ.

ಇಬ್ಬರು ಆರೋಪಿಗಳು ರೈಲಿನ ಎ.ಸಿ. ಬೋಗಿಯಲ್ಲಿ ಪ್ರಯಾಣ ಮಾಡುತ್ತಿದ್ದು, ಹಣ ಪಡೆಯಲು ಓರ್ವ ಇಂದ್ರಾಳಿ ನಿಲ್ದಾಣದಲ್ಲಿ ಕಾದು ಕುಳಿತಿದ್ದ ಎನ್ನಲಾಗಿದೆ.

ನೇತ್ರಾವತಿ ಎಕ್ಸ್‌ಪ್ರೆಸ್‌ನಲ್ಲಿ ಪದೇಪದೇ ನಡೆಯುವ ಕಳ್ಳತನದ ಪತ್ತೆಗಾಗಿ ರೈಲ್ವೆ ರಕ್ಷಣಾ ವಿಭಾಗ ಹೆಚ್ಚುವರಿಯಾಗಿ ಸಿಬ್ಬಂದಿಯನ್ನು ನೇಮಿಸಿದ್ದು, ಶುಕ್ರವಾರವೂ ಎಂದಿನಂತೆ ತಪಾಸಣೆಗೆ ಮುಂದಾಗಿದೆ.

ಈ ವೇಳೆ ಎ.ಸಿ. ಬೋಗಿಯಲ್ಲಿದ್ದ ಇಬ್ಬರ ನಡವಳಿಕೆಯಿಂದ ಅನುಮಾನಗೊಂಡ ಪೊಲೀಸರು ಟಿಕೆಟ್ ನೀಡುವಂತೆ ಕೇಳಿದ್ದಾರೆ. ಟಿಕೆಟ್‌ನಲ್ಲಿದ್ದ ಹೆಸರಿಗೂ ಆರೋಪಿಗಳ ಹೆಸರಿಗೂ ವ್ಯತ್ಯಾಸವಿದ್ದ ಹಿನ್ನೆಲೆಯಲ್ಲಿ ತಪಾಸಣೆ ತೀವ್ರಗೊಳಿಸಿದ್ದಾರೆ.

ಈ ಸಂದರ್ಭ ಆರೋಪಿಗಳ ಬ್ಯಾಗ್‌ನಲ್ಲಿ ಒಂದೂವರೆ ಕೋಟಿ ರೂ.ಗೂ ಅಧಿಕ ನಗದು ಪತ್ತೆಯಾಗಿದೆ. ಇದೀಗ ಆರೋಪಿಗಳ ವಿಚಾರಣೆ ಮುಂದುವರಿದಿದ್ದು, ಐಟಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.

ಉಡುಪಿ ತಹಶೀಲ್ದಾರ್, ಚುನಾವಣಾಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟಿದ್ದು, ಹಣದ ಮೂಲದ ಬಗ್ಗೆ ತೀವ್ರ ಸ್ವರೂಪದ ವಿಚಾರಣೆ ಮುಂದುವರಿದಿದೆ.

ಆರೋಪಿಗಳು ಜಾಗದ ಖರೀದಿಗಾಗಿ ಹಣ ತಂದಿರುವ ಬಗ್ಗೆ ಹೇಳುತ್ತಿದ್ದಾರೆ. ಬೈಂದೂರಿನಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಣದ ಹಂಚಿಕೆಗೆ ತಂದಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.

ಉಡುಪಿ ಐಟಿ ಉಪವಿಭಾಗದ ವಾರ್ಡ್ 3ರ ಹಿರಿಯ ಅಧಿಕಾರಿ ರಘುಕಾಂತಪ್ಪ ಹೆಬ್ಬಾರ್, ಐಟಿಪಿ ಪರ್ವಿಂದರ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News