×
Ad

'ಕೈಗಾರಿಕಾ ವಲಯಗಳ ಕಂಪೆನಿ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿ'

Update: 2018-11-03 20:30 IST

ಮಂಗಳೂರು, ನ. 3: ಬೈಕಂಪಾಡಿ ಸಹಿತ ವಿವಿಧ ಕೈಗಾರಿಕಾ ವಲಯಗಳ ಕಂಪೆನಿಗಳ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು ಕೈಗಾರಿಕೆಗಳ ಸ್ಥಾಪನೆಗಾಗಿ ಜಮೀನು ಬಿಟ್ಟುಕೊಟ್ಟವರಿಗೆ ಸೂಕ್ತ ಪರಿಹಾರ ನೀಡಬೇಕು ಎಂಬ ಆಗ್ರಹ ಬೈಕಂಪಾಡಿಯ ಕೆನರಾ ಸಣ್ಣ ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಶನಿವಾರ ನಡೆದ ಜನಪ್ರತಿನಿಧಿಗಳ-ಕೈಗಾರಿಕೋದ್ಯಮಿಗಳ ಅಹವಾಲು ಸಲ್ಲಿಕೆ ಸಭೆಯಲ್ಲಿ ಕೇಳಿ ಬಂತು.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಕ್ಕರೆ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಕೆ.ಜೆ. ಜಾರ್ಜ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಕೈಗಾರಿಕಾ ಕಂಪೆನಿಗಳು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಜಮೀನು ಬಿಟ್ಟುಕೊಟ್ಟವರಿಗೂ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ಎಂದರಲ್ಲದೆ, ಬೈಕಂಪಾಡಿಯಲ್ಲಿ ಟ್ರಕ್ ಟರ್ಮಿನಲ್ ಇಲ್ಲದ ಕಾರಣ ಘನ ವಾಹನಗಳು ಹೆದ್ದಾರಿ ಬದಿಯಲ್ಲೇ ನಿಲ್ಲುತ್ತದೆ. ಇದರಿಂದ ಅನೇಕ ಅಪಘಾತಗಳೂ ಸಂಭವಿಸಿವೆ. ಕೈಗಾರಿಕಾ ವಲಯ ಅಭಿವೃದ್ಧಿಗೊಳ್ಳಲು ರಿಂಗ್ ರಸ್ತೆಯ ಆವಶ್ಯಕತೆಯೂ ಇದೆ. ಅಲ್ಲದೆ ಕೈಗಾರಿಕೆಗಳ ಸ್ಥಾಪನೆಗೆ ಬ್ಯಾಂಕ್‌ಗಳ ಸಹಕಾರವೂ ಮುಖ್ಯವಾಗಿವೆ. ಬ್ಯಾಂಕ್ ಅಧಿಕಾರಿಗಳು ಕೈಗಾರಿಕೋದ್ಯಮಿಗಳಿಗೆ ಸಾಲ ಸೌಲಭ್ಯ ನೀಡಲು ಆಸಕ್ತಿ ತೋರಿಸಲು ಕ್ರಮ ಜರುಗಿಸಬೇಕು ಎಂದರು.

ಮಂಗಳೂರು ನಗರವಲ್ಲದೆ ಜಿಲ್ಲೆಯ ಇನ್ನೆರಡು ಕಡೆ ಕೈಗಾರಿಕಾ ವಲಯ ಸ್ಥಾಪನೆಗೆ ಸರಕಾರ ಒಲವು ತೋರಬೇಕು. ಉದ್ಯೋಗ ಮೇಳ ಆಯೋಜಿಸಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಬೇಕು ಎಂದು ಐವನ್ ಡಿಸೋಜ ಒತ್ತಾಯಿಸಿದರು.

ಕೈಗಾರಿಕಾ ವಲಯ ಸ್ಥಾಪನೆಗೆ ಭೂಸ್ವಾಧೀನಪಡಿಸಿಕೊಂಡವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹೇಳಿದರು. ಕೆಲವು ಕೈಗಾರಿಕೆಗಳು ತಮ್ಮಲ್ಲಿನ ತ್ಯಾಜ್ಯವನ್ನು ಫಲ್ಗುಣಿ ಮತ್ತು ನಂದಿನಿ ನದಿಗೆ ಹರಿಯಬಿಡುವುದರಿಂದ ನದಿನೀರು ಮಾಲಿನ್ಯವಾಗುತ್ತಿವೆ ಎಂದ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್ ಉಪ್ಪುನೀರು ಸಂಸ್ಕರಣೆಗೊಳಿಸಿ ಬಳಕೆಯೋಗ್ಯ ಮಾಡಲು ಮುಂದಾಗಬೇಕು ಎಂದರು.

ಮಂಗಳೂರು ಕಾರ್ಗೋ ಬಂದರು ಅಭಿವೃದ್ಧಿಯೊಂದಿಗೆ ಮಂಗಳೂರನ್ನು ಸರ್ವಿಸ್ ಸೆಂಟರ್ ಆಗಿ ಮಾರ್ಪಡಿಸಲು ಮುಂದಾಗಬೇಕು ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ಆಗ್ರಹಿಸಿದರು.

ಕೆಸಿಸಿಐ ಅಧ್ಯಕ್ಷ ಪಿ.ಬಿ.ಅಬ್ದುಲ್ ಹಮೀದ್ ಮಾತನಾಡಿ ಮಂಗಳೂರು ಬೀಡಿ, ಹೆಂಚು, ಗೋಡಂಬಿ ಉದ್ಯಮಕ್ಕೆ ಹಿಂದೆ ಹೆಸರುವಾಸಿಯಾಗಿತ್ತು. ಲಕ್ಷಾಂತರ ಮಂದಿಗೆ ಉದ್ಯೋಗ ನೀಡುವ ವಲಯವಾಗಿ ಮಂಗಳೂರು ಗುರುತಿಸಿಕೊಂಡಿತ್ತು. ಆದರೆ ಇತ್ತೀಚೆಗೆ ಉದ್ಯೋಗ ಮರೀಚಿಕೆಯಾಗುತ್ತಿವೆ. ವರ್ಷಕ್ಕೆ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮುಗಿಸಿ ಹೊರಬರುತ್ತಿದ್ದಾರೆ. ಅವರಿಗೆ ಉದ್ಯೋಗ ಕಲ್ಪಿಸುವ ಯೋಜನೆ ರೂಪಿಸಬೇಕು ಎಂದರು.

ಕಾರ್ಪೊರೇಟರ್ ಪುರುಷೋತ್ತಮ ಚಿತ್ರಾಪುರ, ಸಾಮಾಜಿಕ ಹೋರಾಟಗಾರ್ತಿ ವಿದ್ಯಾದಿನಕರ್, ಉದ್ಯಮಿ ಆರ್.ಡಿ.ಕಿಣಿ, ಲಾರೆನ್ಸ್ ಮತ್ತಿತರರು ಅಹವಾಲು ಸಲ್ಲಿಸಿದರು. ಕೆನರಾ ಸಣ್ಣ ಕಯಗಾರಿಕಾ ಸಂಘದ ಅಧ್ಯಕ್ಷ ಗೌರವ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲದಾಸ್ ನಾಯಕ್ ಸ್ವಾಗತಿಸಿದರು. ಉಪಾಧ್ಯಕ್ಷ ಅಜಿತ್ ಕಾಮತ್ ವಂದಿಸಿದರು.

ಹೊಸ ಕಾಯ್ದೆಯಂತೆ ಭೂ ದರ ನಿಗದಿಪಡಿಸಿ

ಎಂಆರ್‌ಪಿಎಲ್ ನಾಲ್ಕನೆ ಹಂತದ ವಿಸ್ತರಣಾ ಯೋಜನೆಗೆ ಭೂಮಿ ನೀಡಲು ಮುಂದಾಗಿರುವ ಸುಮಾರು 70ಕ್ಕೂ ಅಧಿಕ ಮಂದಿಯನ್ನು ಒಳಗೊಂಡ ಸಮಿತಿಯೊಂದರ ಪ್ರಧಾನ ಕಾರ್ಯದರ್ಶಿ ದೀಪಕ್ ಪೆರ್ಮುದೆ ಮಾತನಾಡಿ ಎಂಆರ್‌ಪಿಎಲ್‌ಗೆ ನಾವು ಭೂಮಿ ಕೊಡಲು ಸಿದ್ಧರಾಗಿದ್ದೇವೆ. ನಮಗೆ ಹಳೆ ಕಾಯ್ದೆಯ ಆಧಾರದ ಮೇಲೆ ಭೂದರ ನಿಗದಿಪಡಿಸಬಾರದು. ಹೊಸ ಕಾಯ್ದೆಯ ಪ್ರಕಾರದ ಭೂ ದರ ನಿಗದಿಪಡಿಸಿದರೆ ಭೂಮಿ ಕೊಡಲು ಸಿದ್ಧ. ಇಲ್ಲದಿದ್ದರೆ ನಮ್ಮ ಭೂಮಿಯನ್ನು ನಮ್ಮಲ್ಲೇ ಇಟ್ಟುಕೊಳ್ಳುತ್ತೇವೆ ಎಂದರು.

ಇತ್ತೀಚಿನ ಮಳೆ-ನೆರಹಾವಳಿಯಿಂದ ಬೈಕಂಪಾಡಿ ಕೈಗಾರಿಕಾ ವಲಯದ ರಸ್ತೆ,ಒಳಚರಂಡಿ ವ್ಯವಸ್ಥೆ ಹಾಳಾಗಿದೆ. ಹಾಗಾಗಿ ಮೂಲಭೂತ ಸೌಕರ್ಯಕ್ಕೆ 59 ಕೋ.ರೂ. ಅನುದಾನ ನೀಡಬೇಕು. ಬೈಕಂಪಾಡಿ ಕೈಗಾರಿಕಾ ವಲಯ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು, ಅಭಿವೃದ್ಧಿ ಪ್ರಾಧಿಕಾರ ರಚಿಸುವವರಗೆ ಕೈಗಾರಿಕಾ ವಲಯದ ರಸ್ತೆ, ನೀರು, ಒಳಚರಂಡಿಯ ನಿರ್ವಹಣೆಯನ್ನು ಎಸ್‌ಪಿವಿಗೆ ವಹಿಸಿಕೊಡಬೇಕು. ಜೆಸ್ಕೋ ಕಂಪೆನಿಗೆ ನೀಡಿದ ಜಮೀನನ್ನು ಮರಳಿ ಪಡೆದು ಇಲೆಕ್ಟ್ರಾನಿಕ್ ಹಾರ್ಡ್‌ವೇರ್ ಪಾರ್ಕ್, ಲಾಜಿಸ್ಟಿಕ್ ಪಾರ್ಕ್, ಕಾರ್ಮಿಕರಿಗೆ ವಸತಿ ನಿರ್ಮಾಣಕ್ಕೆ ಜಮೀನು, ಅಂತಾರಾಷ್ಟ್ರೀಯ ಪ್ರದರ್ಶನಾ ಕೇಂದ್ರ ಸ್ಥಾಪನೆ, ತ್ಯಾಜ್ಯ ವಸ್ತು ಸಂಸ್ಕರಣಾ ಪ್ಲಾಂಟ್ ನಿರ್ಮಾಣ, ಗ್ರೀನ್‌ಬೆಲ್ಟ್ ಪಾರ್ಕ್ ರಸ್ತೆ ನಿರ್ಮಾಣ ಸಹಿತ ಇತರ ಹಲವು ಬೇಡಿಕೆಯನ್ನು ಕೆನರಾ ಸಣ್ಣ ಕೈಗಾರಿಕಾ ಸಂಘ ಮುಂದಿಟ್ಟಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News