×
Ad

ತಿಂಗಳೊಳಗಾಗಿ 94ಸಿ ಯೋಜನೆಯಡಿ ಫಲಾನುಭವಿಗಳ ಅರ್ಜಿ ವಿಲೇವಾರಿ: ಶಾಸಕ ರಾಜೇಶ್ ನಾಯ್ಕ್

Update: 2018-11-03 23:26 IST

ಬಂಟ್ವಾಳ, ನ. 3: ತಿಂಗಳೊಳಗಾಗಿ 94ಸಿ ಯೋಜನೆಯಡಿ ಫಲಾನುಭವಿಗಳ ಅರ್ಜಿಯನ್ನು ವಿಲೇವಾರಿ ಮಾಡಿ ಹಕ್ಕುಪತ್ರ ವಿತರಿಸಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ತಿಳಿಸಿದ್ದಾರೆ.

ಬಂಟ್ವಾಳ ತಾಲೂಕು ಆಡಳಿತ ವತಿಯಿಂದ ಶನಿವಾರ ಮೆಲ್ಕಾರ್ ನಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಕ್ಕುಪತ್ರ ವಿತರಣೆಗಾಗಿ ಶಾಸಕರ ಸಹಿತ ಜನಪ್ರತಿನಿಧಿಗಳನ್ನು ಕಾಯಬೇಕಾಗಿಲ್ಲ. ಅಧಿಕಾರಿಗಳ ಮಟ್ಟದಲ್ಲೇ ವಿತರಿಸುವಂತೆ ಸಲಹೆ ನೀಡಿದರು. ಅರ್ಹ ಫಲಾನುಭವಿಗಳಿಗೆ ಸರಕಾರದ ಸವಲತ್ತು ಸಹಿತ ಹಕ್ಕುಪತ್ರ ಕೊಡುವುದಷ್ಟೆ ಮುಖ್ಯವಾಗಿದೆ. ಅದನ್ನು ಯಾರು ವಿತರಿಸಬೇಕೆಂಬುದು ಇಲ್ಲಿ ಮುಖ್ಯವಲ್ಲ. ತಾನು ಶಾಸಕನಾದ ಬಳಿಕ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸುವಲ್ಲಿ ಪಕ್ಷ ಭೇದ ಮಾಡಿಲ್ಲ. ಅರ್ಹರನ್ನು ಗುರುತಿಸಿ ಸರಕಾರದ ಸವಲತ್ತು ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಹೊರತು ಕೊಡದಂತೆ ಸೂಚಿಸಿಲ್ಲ ಎಂದು ಸ್ಪಷ್ಟ ಪಡಿಸಿದರು.

ಜಿಲ್ಲೆಯನ್ನು ಕಾಡುತ್ತಿರುವ ಮರಳು ಸಮಸ್ಯೆಯನ್ನು ತಕ್ಷಣ ಬಗೆಹರಿಸಿ, ಕಡಿಮೆ ದರದಲ್ಲಿ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರನ್ನು ಒತ್ತಾಯಿಸಿದ ಶಾಸಕರು ಕಾನೂನಾತ್ಮಕವಾಗಿ, ಭೂ ಪರಿವರ್ತನೆ, 9/11 ಸಮಸ್ಯೆ, ಅಡಕೆ ಕೊಳೆರೋಗ ಬಾಧಿತರಿಗೆ ಇನ್ನು   ಪರಿಹಾರ ಸಿಗದಿರುವುದು, ಸರಕಾರದ ಅನುದಾನ ತಾಲೂಕುವಾರು ವಿಂಗಡಣೆ, ಅತಿಥಿ ಶಿಕ್ಷಕರಿಗೆ ಸಿಗುವ ವೇತನದಲ್ಲಿ ಆಗುತ್ತಿರುವ ತಾಂತ್ರಿಕ ತೊಂದರೆಯನ್ನು ಇತ್ಯರ್ಥ ಪಡಿಸಲು ಕ್ರಮಕೈಗೊಳ್ಳುವಂತೆಯು ಜಿಲ್ಲಾಧಿಕಾರಿಯವರನ್ನು ಕೋರಿದರು. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅಧ್ಯಕ್ಷತೆ ವಹಿಸಿದರು.

ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಎಂ ಬಂಗೇರ, ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮುಹಮ್ಮದ್, ತುಂಗಪ್ಪ ಬಂಗೇರ, ಮಮತಾ ಗಟ್ಟಿರವೀಂದ್ರ ಕಂಬಳಿ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸೇಲ್ವಮನಿ, ಮಂಗಳೂರು ಸಹಾಯಕ ಕಮಿಷನರ್ ರವಿಚಂದ್ರ ನಾಯಕ್, ಬಂಟ್ವಾಳ ಉಪವಿಭಾಗದ ಎಎಸ್ಪಿ ಸೊನಾವಣೆ ಋಷಿಕೇಶ್ ಭಗವಾನ್ ಮೊದಲಾದವರು ವೇದಿಕೆಯಲ್ಲಿದ್ದರು.

ಈ ಮೊದಲು ತಾಲೂಕು ಕಚೇರಿಯಲ್ಲಿ ಸ್ವೀಕರಿಸಲಾದ ಸೇರಿದಂತೆ ಒಟ್ಟು 72 ಅರ್ಜಿಗಳ ಪೈಕಿ 26 ಅರ್ಜಿಯನ್ನು ಸಭೆಯಲ್ಲಿ ವಿಲೇ ಮಾಡಲಾಯಿತು. ಹಾಗೆಯೇ ಉಳಿದ ಅರ್ಜಿಗಳನ್ನು ವಿಲೇವಾರಿಗೆ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ವಿವಿಧ ಇಲಾಖೆಗೆ ಕಳುಹಿಸಲಾಯಿತು. ಸಭೆಯಲ್ಲಿ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಹಾಜರಿದ್ದರು. ತಹಶೀಲ್ದಾರ್ ಪುರಂದರ ಹೆಗ್ಡೆ ಸ್ವಾಗತಿಸಿದರು. ಶಿಕ್ಷಕ ರಾಮಚಂದ್ರ ರಾವ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News