ಪನೀರ್: ಎಸ್ವಿಪಿ ವತಿಯಿಂದ ಹಿರಿಯ ನಾಗರಿಕರ ದಿನಾಚರಣೆ
ಉಳ್ಳಾಲ, ನ.4: ದೇರಳಕಟ್ಟೆ ಸಮೀಪದ ಪನೀರ್ ಮೆರ್ಸಿಯಮ್ಮನವರ ಇಗರ್ಜಿ, ಸಂತ ವಿಶೆಂತ್ ಪಾವ್ಲ್ ಸಭಾ ಹಾಗೂ ಯುವ ಘಟಕದ ಜಂಟಿ ಆಶ್ರಯದಲ್ಲಿ ರವಿವಾರ ಚರ್ಚ್ ಸಭಾಂಗಣದಲ್ಲಿ ಹಿರಿಯ ನಾಗರಿಕರ ದಿನ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪನೀರ್ ಮೆರ್ಸಿಯಮ್ಮನವರ ಇಗರ್ಜಿಯ ಧರ್ಮಗುರು ಫಾ.ಡೆನ್ನಿಸ್ ಸುವಾರಿಸ್ ಇಂದು ಹಿರಿಯ ನಾಗರಿಕರಿಗೆ ಹೆಚ್ಚಿನ ಮನೆಗಳಲ್ಲಿ ಸ್ಥಾನ ಸಿಗದೆ ವೃದ್ಧಾಶ್ರಮ ಸೇರುವಂತಾಗಿದೆ. ಇಂತಹ ದಿನಗಳಲ್ಲಿ ಹಿರಿಯನ್ನು ಒಂದೆಡೆ ಸೇರಿಸಿ ಉಡುಗೊರೆ ನೀಡುವುದು ಉತ್ತಮ ಸಂಪ್ರದಾಯ ಎಂದರು.
ಚರ್ಚ್ನ ಉಪಾಧ್ಯಕ್ಷ ಎಲಿಯಾಸ್ ಡಿಸೋಜ ಮಾತನಾಡಿ, ಹಿರಿಯ ವ್ಯಕ್ತಿಗಳು ಸಮಾಜಕ್ಕೆ ಮಾರ್ಗದರ್ಶಕರಾಗಿದ್ದರೂ ಯಾಂತ್ರೀಕೃತ ಯುಗ ಎನಿಸಿರುವ ಇಂದಿನ ದಿನಗಳಲ್ಲಿ ಅವರನ್ನು ಕಡೆಗಣಿಸಲಾಗುತ್ತಿದೆ. ವರ್ಷಕ್ಕೊಮ್ಮೆ ಹಿರಿಯ ನಾಗರಿಕರನ್ನು ಒಂದೆಡೆ ಸೇರಿಸುವ ಕಾರ್ಯಕ್ರಮ ನಡೆದಾಗ ಹಿಂದಿನ ಸ್ನೇಹಿತರು ಜತೆಯಾಗಿ ಒಂಟಿತನ ದೂರವಾಗಲಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ದಿಯೋಕಾನ್ ಫ್ರಾಂಕ್ಲಿನ್ ಪಿಂಟೊ, ಬ್ರದರ್ ಜಾನ್ಸನ್ ಪಿರೇರಾ, ಕೆಥೊಲಿಕ್ ಸಭಾ ಅಧ್ಯಕ್ಷ ಸ್ಟ್ಯಾನಿ ರೋಡ್ರಿಗಸ್ ಭಾಗವಹಿಸಿದ್ದರು. ಜಾನ್ ಪಾಯ್ಸ ಸ್ವಾಗತಿಸಿದರು. ಪ್ಯಾಟ್ರಿಕ್ ರೋಡ್ರಿಗಸ್ ವಂದಿಸಿದರು. ದೀಪಕ್ ರೋಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.