ಎಚ್1ಎನ್1 ಜಾಗೃತಿ ಅಗತ್ಯ: ಡಾ. ದೀಪಾ ಪ್ರಭು
ಬಂಟ್ವಾಳ, ನ. 5: ತಾಲೂಕಿನಲ್ಲಿ ಎಚ್1ಎನ್1 ಕುರಿತು ಹೆದರುವ ಅಗತ್ಯವಿಲ್ಲ. ಬದಲಾಗಿ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಾಗಿದೆ ಎಂದು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಹೇಳಿದ್ದಾರೆ.
ಸೋಮವಾರ ನಡೆದ ಬಂಟ್ವಾಳ ತಾಲೂಕು ಪಂಚಾಯತ್ ಕೆಡಿಪಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿ, ಸಜೀಪನಡು ಮತ್ತು ಕನ್ಯಾನ ಗ್ರಾಮದ ಒಟ್ಟು ಮೂವರು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದವರು ಮೃತಪಟ್ಟಿದ್ದು, ಆ ಬಳಿಕ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ತಾಲೂಕಿನ ಕೆಲ ಗ್ರಾಮ ಪಂಚಾಯತ್ಗಳಿಗೆ ಮೆಸ್ಕಾಂನ ದೊಡ್ಡ ಮೊತ್ತದ ಬಿಲ್ ಬಾಕಿ ಇದೆ ಎಂಬ ವಿಚಾರ ಸಭೆಯಲ್ಲಿ ಪ್ರಸ್ತಾಪಿಸಲಾಯಿತು.
ಇದಕ್ಕೆ ಸಂಬಂಧಿಸಿ, ಇಒ, ಗ್ರಾಪಂಗಳಿಗೆ ಮೆಸ್ಕಾಂ ಬಿಲ್ ವಿಷಯದಲ್ಲಿ ಏನು ತಕರಾರು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ಸಂದರ್ಭ ಉತ್ತರಿಸಿದ ಎಇಇ ನಾರಾಯಣ ಭಟ್, ಅಮ್ಟಾಡಿ ಪಂಚಾಯತ್ನಿಂದ ಬಿಲ್ ಬರಲು ಬಾಕಿ ಇದೆ ಎಂದರು.
ನೀರಿನ ಪಂಪ್ ಸಹಿತ ಹಲವು ವಿಚಾರದಲ್ಲಿ ಅಧಿಕಾರಿಗಳು ಮತ್ತು ಗ್ರಾಪಂ ಸಮನ್ವಯ ಸಭೆಯೊಂದನ್ನು ಕರೆದು ಸಮಸ್ಯೆಯನ್ನು ಶೀಘ್ರ ಬಗೆಹರಿಸಿಕೊಳ್ಳಬೇಕು ಎಂದು ಇಒ ತಿಳಿಸಿದರು. ಅರಣ್ಯ ಇಲಾಖೆಯ ಯೋಜನೆಯಾದ ಆಲಂಪುರಿ ಟ್ರೀ ಪಾರ್ಕ್ಗೆ 60 ಲಕ್ಷ ರೂ. ಕೋರಲಾಗಿದ್ದು, 20 ಲಕ್ಷವಷ್ಟೇ ದೊರಕಿದೆ ಎಂದು ವಲಯ ಅರಣ್ಯಾಧಿಕಾರಿ ಬಿ.ಸುರೇಶ್ ತಿಳಿಸಿದರು.
ನರಹರಿ ಪರ್ವತದಲ್ಲಿ ದೈವೀವನ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಂಬಳ ಬಂದಿಲ್ಲ: ಅಂಗನವಾಡಿ ಕಾರ್ಯಕರ್ತೆಯರಿಗೆ ಸೆಪ್ಟೆಂಬರ್ವರೆಗೆ ಗೌರವಧನ ಪಾವತಿಯಾಗಿದೆ. ನಮ್ಮ ಸಿಬ್ಬಂದಿಗಳಿಗೆ ವೇತನ ಇನ್ನೂ ದೊರಕಿಲ್ಲ ಎಂದು ಸಿಡಿಪಿಒ ಹೇಳಿದರು. ಹೆಚ್ಚುವರಿ ಅಂಗನವಾಡಿ ಕೇಂದ್ರಗಳು ಬೇಕಾದರೆ ಪಟ್ಟಿಯನ್ನು ನೀಡಲು ಮುಖ್ಯಕಾರ್ಯನಿರ್ವಹಣಾಧಿಕಾರಿ ತಿಳಿಸಿದರು.
ಅರಣ್ಯ, ತೋಟಗಾರಿಕೆ ಮತ್ತು ಸಾಮಾಜಿಕ ತೋಟಗಾರಿಕೆ ಇಲಾಖೆಯವರು ಎನ್ಆರ್ಇಜಿ ಯೋಜನೆಯನ್ನು ಹೆಚ್ಚು ಕಾರ್ಯಗತಗೊಳಿಸಲು ಇಒ ಅವರು ತಿಳಿಸಿದರು. ಎಲ್ಲ ಸ್ಮಶಾನ ಅಭಿವೃದ್ಧಿ ಜಾಗದಲ್ಲಿ ಗಿಡಗಳನ್ನು ನೆಡಲು ವ್ಯವಸ್ಥೆ ಮಾಡಲು ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ನೀರಿನ ಸಮಸ್ಯೆ: ಬೇಸಿಗೆ ಕಾಲದಲ್ಲಿ ನರಿಂಗಾನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 20 ಮನೆಗಳಿಗೆ ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಲು ಇಂಜಿನಿಯರ್ ವಿಭಾಗದ ಅಧಿಕಾರಿಗಳಿಗೆ ಇಒ ಸೂಚಿಸಿದರು.
ಗ್ರಾಮಸ್ಥರ ವಿರೋಧ: ಇರಾ ಕೈಗಾರಿಕಾ ಪ್ರದೇಶಕ್ಕೆ ಮಂಚಿ ಮತ್ತು ಕುಕ್ಕಾಜೆ ರಸ್ತೆ ಬದಿಯಲ್ಲಿ ಮೆಸ್ಕಾಂ ಕೇಬಲ್ ಹಾಕಲು ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿರುವ ಕುರಿತು ಪ್ರಸ್ತಾಪಿಸಿದ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಇಲ್ಲಿ ಬದಲಿ ವ್ಯವಸ್ಥೆ ಮಾಡಿ ಸಮಸ್ಯೆಗಳನ್ನು ಪರಿಹರಿಸಲು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭ ಉತ್ತರಿಸಿದ ಮೆಸ್ಕಾಂ ಎಇಇ ಪ್ರವೀಣ್ ಜೋಷಿ, ಜನರ ತಪ್ಪುಕಲ್ಪನೆಯಿಂದ ಹೀಗಾಗಿದೆ. ಅಧಿಕಾರಿಗಳು ಹೇಳಿದರೆ ಕೇಳುವುದಿಲ್ಲ, ಹೀಗಾಗಿ ಜನಪ್ರತಿನಿಧಿಗಳು ಈ ವಿಚಾರದ ಕುರಿತು ಅಧಿಕಾರಿಗಳ ಸಭೆ ಕರೆದರೆ, ವಿಚಾರವನ್ನು ಜನರಿಗೆ ಮನದಟ್ಟು ಮಾಡಲು ಸುಲಭವಾಗುತ್ತದೆ ಎಂದರು.
ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ಇಒ ರಾಜಣ್ಣ ಉಪಸ್ಥಿತರಿದ್ದರು.