ಮಾಂಡ್ ಸೊಭಾಣ್ನಲ್ಲಿ ಪ್ರಜೋತ್ ಡೆಸಾ ಸಂಗೀತ ಸಂಜೆ: ಕಲಾವಿದ ಡೊಲ್ಲಾಗೆ ‘ಕಲಾಕಾರ್ ಪುರಸ್ಕಾರ’ ಪ್ರದಾನ
ಮಂಗಳೂರು, ನ.5: ಕೊಂಕಣಿ ಕಲೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಮಾಂಡ್ ಸೊಭಾಣ್ ನಿರಂತರವಾಗಿ ಕೆಲಸ ಮಾಡುತ್ತಿದೆ. ಇದರಿಂದ ಕೊಂಕಣಿ ಕಲೆ, ಸಂಸ್ಕೃತಿಗೆ ತುಂಬಾ ಉತ್ತೇಜನ ದೊರೆಯುತ್ತಿದೆ. ಡೊಲ್ಲಾ ಮಂಗಳೂರುರಂತಹ ಹಿರಿಯ ಕಲಾವಿದರನ್ನು ಗೌರವಿಸಲು ಸಂತಸವಾಗುತ್ತಿದೆ. ಭಾಷೆಯ ಉಳಿಇಗಾಗಿ ಯುವಕರು ಪರಂಪರೆಯನ್ನು ಮುಂದುವರಿಸಬೇಕು ಎಂದು ಸಂತ ಎಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ವಂ. ಪ್ರವೀಣ್ ಮಾರ್ಟಿಸ್ ಹೇಳಿದರು.
ಶಕ್ತಿನಗರದ ಕಲಾಂಗಣದಲ್ಲಿ ರವಿವಾರ ಕಾರ್ವಾಲ್ ಘರಾಣೆಂ ಹಾಗೂ ಮಾಂಡ್ ಸೊಭಾಣ್ ವತಿಯಿಂದ ನೀಡಲಾಗುವ 14 ನೇ ಕಲಾಕಾರ್ ಪುರಸ್ಕಾರ ವನ್ನು ಡೊಲ್ಲಾ ಮಂಗಳೂರು ಅವರಿಗೆ ಹಸ್ತಾಂತರಿಸಿ ಮಾತನಾಡಿದರು. ಪ್ರಶಸ್ತಿಯು ಸ್ಮರಣಿಕೆ, ಸನ್ಮಾನಪತ್ರ ಹಾಗೂ 25,000 ರೂ. ಒಳಗೊಂಡಿವೆ.
ಕಾರ್ವಾಲ್ ಘರಾಣೆಂ ಇದರ ಪ್ರತಿನಿಧಿ ಡಾ. ಪ್ರತಾಪ್ ನಾಯ್ಕ ಪ್ರಾಸ್ತಾವಿಕ ನುಡಿಗಳಾನ್ನಾಡಿದರು. ವೇದಿಕೆಯಲ್ಲಿ ಮಾಂಡ್ ಸೊಭಾಣ್ ಪದಾಧಿಕಾರಿ ಗಳಾದ ಎರಿಕ್ ಒಝಾರಿಯೊ, ಲುವಿ ಜೆ. ಪಿಂಟೊ, ಕಿಶೋರ್ ಫೆರ್ನಾಂಡಿಸ್ ಹಾಗೂ ಡೊಲ್ಲಾರ ಪತ್ನಿ ವೆಲೆಂಟಿನ್ ಕುಟಿನ್ಹಾ ಮತ್ತು ಪುತ್ರ ಡೆನೆಲ್ ಉಪಸ್ಥಿತರಿದ್ದರು.
ಹೊನ್ನಾವರದ ಹಿರಿಯ ಬ್ರಾಸ್ಬ್ಯಾಂಡ್ ಕಲಾವಿದ ಜೇಮ್ಸ್ ಲೊಪಿಸ್ 203ನೇ ತಿಂಗಳ ವೇದಿಕೆಗೆ ಚಾಲನೆ ನೀಡಿದರು. ಯುವ ಗಾಯಕ ಪ್ರಜೋತ್ ಡೆಸಾ ಹಾಗೂ ತಂಡದಿಂದ ಸಂಗೀತ ರಸಮಂಜರಿ ನಡೆಯಿತು.
ನವಗಾಯಕರಾದ ಪ್ರಿಥುಮಾ ಮೊಂತೇರೊ, ಸಿಯೊನ್ ಮಾರ್ಟಿಸ್, ಅಶ್ವಿಜಾ ಮೆಂಡೊನ್ಸಾ, ಗ್ಯಾವಿನ್ ಮಿನೇಜಸ್, ರನೀಶ್ ರೊಡ್ರಿಗಸ್, ಸೋನಲ್ ಮೊಂತೇರೊ ಮತ್ತು ಡೆರಿಕ್ ಡಿಸೋಜ ಹಾಡಿ ರಂಜಿಸಿದರು. ಕೀ ಬೋರ್ಡಲ್ಲಿ ಗುರುರಾಜ್ ಎಂ.ಜಿ., ಲೀಡ್ ಗಿಟಾರಲ್ಲಿ ರೋಶನ್ ಕ್ರಾಸ್ತಾ, ಡ್ರಮ್ಸ್ನಲ್ಲಿ ಸಚಿನ್ ಸಿಕ್ವೆರಾ ಹಾಗೂ ಬೇಜ್ ಗಿಟಾರಲ್ಲಿ ಆಶ್ವಿನ್ ಕೊರೆಯಾ ಸಹಕರಿಸಿದರು. ಬ್ಲೂ ಏಂಜಲ್ಸ್ ತಂಡದಿಂದ ಹಾರ್ಮನಿಸ್, ಅಕಾಪೆಲ್ಲಾ-ಅನ್ಪ್ಲಗ್ಡ್ ಪ್ರಯೋಗ ಸಾದರವಾಯಿತು. ರೂಬನ್ ಬ್ರಾಗ್ಸ್, ರೆನೊಲಾ ಡಿಸೋಜ ಹಾಗೂ ಆಶಿಕಾ ನೃತ್ಯ ಪ್ರದರ್ಶಿಸಿದರು.
ವಿತೊರಿ ಕಾರ್ಕಳ ಸಭಾ ಕಾರ್ಯಕ್ರಮ ಹಾಗೂ ಸಂಗೀತ ಸಂಜೆಯನ್ನು ಅರುಣ್ ದಾಂತಿ ನಿರೂಪಿಸಿದರು.