ಮಣಿನಾಲ್ಕೂರು ಗ್ರಾಪಂಗೆ ಸೇರಿದ ನೀರಿನ ಟ್ಯಾಂಕ್ನ 3 ಗೇಟ್ವಾಲ್ವ್ ಕಳವು
Update: 2018-11-07 14:41 GMT
ಬಂಟ್ವಾಳ, ನ. 7: ಗ್ರಾಮ ಪಂಚಾಯತ್ಗೆ ಸೇರಿದ ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್ನ ಗೇಟ್ವಾಲ್ವ್ನ್ನು ಕಿಡಿಗೇಡಿಗಳು ಕಳವು ಗೈದ ಘಟನೆ ಮಂಗಳವಾರ ನಡೆದಿದ್ದು, ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಣಿನಾಲ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾವಿನಕಟ್ಟೆ ಸಮೀಪದ ನ್ಯಾಯದಕಟ್ಟೆಯಲ್ಲಿರುವ ಬೃಹತ್ ಕುಡಿಯುವ ನೀರು ಯೋಜನೆಗೆ ಸಂಬಂಧಪಟ್ಟ ನೀರಿನ ಟ್ಯಾಂಕ್ನ 3 ಗೇಟ್ ವಾಲ್ವ್ಗಳನ್ನು ಕಳವುಗೈಯಲಾಗಿದೆ. ಈ ಪೈಕಿ ಗೇಟ್ವಾಲ್ವ್ನ್ನು ಹಾನಿ ಗೈದು ಎಸೆದು ಹೋಗಿದ್ದಾರೆ. ಇದರಿಂದಾಗಿ ಪಂಚಾಯತ್ಗೆ ಸುಮಾರು 50 ಸಾವಿರ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಗ್ರಾಪಂನ ಮಾವಿನಕಟ್ಟೆ ವ್ಯಾಪ್ತಿಯ ಸುಮಾರು 124 ಮಂದಿ ಬಳಕೆದಾರರಿಗೆ ಇದರ ನೀರು ಸರಬರಾಜುಗೊಳ್ಳುತ್ತಿದ್ದು, ಕಿಡಿಗೇಡಿಗಳ ಕೃತ್ಯದಿಂದ ಗ್ರಾಮಸ್ಥರು ಕುಡಿಯಲು ನೀರಿಲ್ಲದೆ ಪರದಾಡುವಂತಾಗಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.