×
Ad

ಮಂಗಳೂರು: ಸ್ವರ್ಣೋದ್ಯಮಿಗೆ ಭೂಗತ ಪಾತಕಿ ರವಿ ಪೂಜಾರಿ ಹೆಸರಲ್ಲಿ ಬೆದರಿಕೆ ಕರೆ

Update: 2018-11-07 21:37 IST

ಮಂಗಳೂರು, ನ.7: ನಗರದ ಚಿನ್ನಾಭರಣ ಉದ್ಯಮಿ ಹಾಗೂ ಅವರ ಪುತ್ರನಿಗೆ ಭೂಗತ ಪಾತಕಿ ರವಿ ಪೂಜಾರಿ ಹೆಸರಿನಲ್ಲಿ ಹಫ್ತಾಕ್ಕಾಗಿ ಬೆದರಿಕೆ ಕರೆ ಮಾಡುತ್ತಿದ್ದು, ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ವರ್ಣೋದ್ಯಮಿ ರವೀಂದ್ರ ಶೇಟ್ ಅವರಿಗೆ ಅ.30ರಂದು ಸಂಜೆ 5 ಗಂಟೆಗೆ ಕರೆ ಬಂದಿದ್ದು, ಈ ಸಂದರ್ಭ ಪುತ್ರ ಶರತ್ ಶೇಟ್ ಅವರನ್ನು ವಿಚಾರಿಸಿದ್ದಾರೆ. ನ.1ರಂದು ಅಪರಾಹ್ನ 3:30ಕ್ಕೆ ಹಾಗೂ ನ.5ರಂದು ಸಂಜೆ 4:30ಕ್ಕೆ ಶರತ್ ಶೇಟ್ ಅವರ ಮೊಬೈಲ್‌ಗೆ ಕರೆ ಬಂದಿದೆ.

‘ಪ್ರತೀ ಬಾರಿ ಕರೆ ಮಾಡಿದಾಗ ಹಣ ನೀಡಬೇಕು. ಇಲ್ಲದಿದ್ದರೆ ಮುಂದಿನ ಪರಿಣಾಮ ಎದುರಿಸಬೇಕು’ ಎಂದು ಬೆದರಿಕೆಯೊಡ್ಡಲಾಗಿದೆ. ಅಲ್ಲದೆ, ಅವರ ಕುಟುಂಬದ ಎಲ್ಲ ಸದಸ್ಯರ ಮೊಬೈಲ್‌ಗಳಿಗೆ ಹಾಗೂ ಅಂಗಡಿಯ ಸ್ಥಿರ ದೂರವಾಣಿಗೂ ಕರೆ ಮಾಡಿ ಹಣ ನೀಡುವಂತೆ ಬೆದರಿಕೆಯೊಡ್ಡಿದ್ದಾನೆ. ಇದರಿಂದ ಕುಟುಂಬ ಆತಂಕಗೊಂಡಿದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರವೀಂದ್ರ ಶೇಟ್ ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News