ದೀಪಾವಳಿ- ಮೀಲಾದುನ್ನಬಿ ಪ್ರಯುಕ್ತ ಬಿ-ಹ್ಯೂಮನ್, ಹಿದಾಯ ಫೌಂಡೇಶನ್‌ನಿಂದ ವಿಶಿಷ್ಟ ಸೇವೆ

Update: 2018-11-12 14:25 GMT

ಮಂಗಳೂರು, ನ.12: ಎಲ್ಲ ಧರ್ಮಗಳು ಮಾನವ ಕಲ್ಯಾಣ ಬಯಸುತ್ತವೆ. ಮನುಷ್ಯರ ಸೇವೆಯಲ್ಲಿ ದೇವನ ತೃಪ್ತಿ ತಲುಪುವುದು ಅತ್ಯಂತ ಶ್ರೇಷ್ಠ ಕಾರ್ಯ ವಾಗಿದೆ. ಕಳೆದ ಮೂರು ದಿನಗಳಲ್ಲಿ ಬಿ-ಹ್ಯೂಮನ್ ಚಾರಿಟಿ ಸಂಸ್ಥೆ ಮತ್ತು ಹಿದಾಯ ಪೌಂಡೇಶನ್ ಜಿಲ್ಲೆಯಲ್ಲಿ ದೀಪಾವಳಿ ಮತ್ತು ಮೀಲಾದುನ್ನಬಿ ಪ್ರಯುಕ್ತ ವಿಶಿಷ್ಟ ಮಾನವ ಸೇವೆ ನೀಡಿ ಹಲವು ಸಂಸಾರಗಳ ಕಣ್ಣೀರು ಒರೆಸಿತು.

ಉಳ್ಳಾಲದಲ್ಲಿ ನಾರಾಯಣ ಎಂಬವರು ಕಳೆದ ಒಂದು ವರ್ಷದ ಹಿಂದೆ ಪೈಂಟರ್ ಕೆಲಸ ಮಾಡುತ್ತಿದ್ದಾಗ ಕಟ್ಟಡದಿಂದು ಬಿದ್ದು ಕೋಮಾ ಸ್ಥಿತಿಗೆ ತಲುಪಿ ದ್ದರು. ಅವರ ಕುಟುಂಬ ನಾರಾಯಣ್ ಅವರ ದುಡಿಮೆಯನ್ನೇ ಆಶ್ರಯಿಸಿತ್ತು. ಅವರಿಗೆ ಯಾವುದೇ ಸಂಪಾದನೆಯ ದಾರಿ ಇರಲಿಲ್ಲ. ಇದನ್ನು ತಿಳಿದ ಬಿ-ಹ್ಯೂಮನ್‌ನ ಆಶಿಫ್ ಡೀಲ್ಸ್ ನೇತೃತ್ವದಲ್ಲಿ ಈ ಮನೆಗೆ ಭೇಟಿ ನೀಡಿ ಅವರ 87 ಸಾವಿರ ರೂ. ಫೈನಾನ್ಸ್ ಸಾಲವನ್ನು ತೀರಿಸಿತು. ಹಿದಾಯ ಪೌಂಡೇಶನ್ ಈ ಕುಟುಂಬಕ್ಕೆ ಒಂದು ವರ್ಷದ ರೇಶನ್ ನೀಡಿತು. ಚಿಕಿತ್ಸೆಗೆ ಬೇಕಾದ ನೆರವು ನೀಡುವ ಸಾಂತ್ವನವನ್ನೂ ಹೇಳಿತು.

ಬುದ್ಧಿ ಸಮತೋಲನ ತಪ್ಪಿದ ಕಾರಣದಿಂದ ಅವರು ಬೀದಿಯಲ್ಲಿ ಅಲೆದಾಡುತ್ತಾರೆ. ಅವರು ಅತ್ಯಂತ ನತದೃಷ್ಟ ಮನುಷ್ಯರಾಗಿ ಬದುಕುತ್ತಾರೆ. ಇಂತಹ ಮನುಷ್ಯರ ಸೇವೆ ಮಾಡುವ ಸ್ನೇಹಾಲಯದ ಸೇವೆ ಅನನ್ಯ. ಕಳೆದ ಎರಡು ದಿನ ಸ್ನೇಹಾಲಯದ ಜೋಸೆಫ್ ಕ್ರಾಸ್ತಾರ ಜೊತೆ ನಗರದ ಬೀದಿಯಲ್ಲಿರುವ ಮಾನಸಿಕ ಅಸ್ವಸ್ಥರನ್ನು ಸಂರಕ್ಷಿಸುವ ಕಾರ್ಯ ಬಿ-ಹ್ಯೂಮನ್ ತಂಡವು ಮಾಡಿತು.

ಸ್ನೇಹಾಲಯಕ್ಕೂ ಭೇಟಿ ನೀಡಿ ಅವರಿಗೆ ದೀಪಾವಳಿಯ ಶುಭ ಕೋರಿದರು. 300ಕ್ಕೂ ಹೆಚ್ಚು ರೋಗಿಗಳನ್ನು ಸಂಪೂರ್ಣ ಗುಣಪಡಿಸಿ ಅವರನ್ನು ಸಾಮಾನ್ಯ ಮನುಷ್ಯರಂತೆ ಬದುಕಲು ಅವಕಾಶ ಮಾಡಿ ಕೊಟ್ಟ ಸ್ನೇಹಾಲಯಕ್ಕೆ ಬಿ-ಹ್ಯೂಮನ್ ವತಿಯಿಂದ ಆರ್ಥಿಕ ಸಹಾಯ ನೀಡಲಾಯಿತು.

ನಂತರ ಮಾತನಾಡಿದ ಹಾರಿಸ್ ಸ್ನೇಹಜೀವಿ, ಪ್ರವಾದಿ ಮುಹಮ್ಮದ್‌ರು ಜನಿಸಿದ ತಿಂಗಳನ್ನು ಅರ್ಥಪೂರ್ಣ ಮಾಡಿದ, ಸಂದೇಶವನ್ನು ಪ್ರಾಯೋಗಿಕ ಮಾಡಿದ ಬಿ-ಹ್ಯೂಮನ್ ಸದಸ್ಯರ ಸೇವೆ ಎಲ್ಲರಿಗೂ ಮಾದರಿಯಾಗಿದೆ ಎಂದರು. ಮೂರು ದಿನದ ಈ ಪ್ರಯಾಣದಲ್ಲಿ ಹಿದಾಯ ಫೌಂಡೇಶನ್‌ನ ಸಾದಿಕ್ ಹಸನ್ ಮತ್ತು ಸಿದ್ದೀಕ್ , ಬಿ- ಹ್ಯೂಮನ್ ನ ಪ್ರದೀಪ್ ಕೊಟ್ಟಾರಿ, ವಿಂನ್ಸಿ ಡಿಸೋಜ, ಸಲೀಂ, ಅಹ್ನಾಫ್ ಡೀಲ್ಸ್, ಕರೀಮ್, ರಹ್ಮಾನ್, ಉಳ್ಳಾಲ ಮುಕ್ಕಚ್ಚೇರಿ ಪ್ರೆಂಡ್ಸ್ ಇದರ ಸದಸ್ಯರು ಭಾಗವಹಿಸಿದ್ದರು.

ಟಾಲೆಂಟ್ ರಿಸರ್ಚ್ ಫೌಂಡೇಶನ್‌ನಿಂದ ನೆರವು

ಪುತ್ತೂರು ತಾಲೂಕಿನಲ್ಲಿ ಎರಡು ಸಂಸಾರಕ್ಕೆ ನೆರಾವಾದ ಬಿ-ಹ್ಯೂಮನ್ ಮತ್ತು ಹಿದಾಯ ಫೌಂಡೇಶನ್ ಇಬ್ಬರು ಯುವತಿಯರ ಮದುವೆಗೆ ನೆರವು ನೀಡಿತು. ರೇಶನ್ ಮತ್ತು ಶಿಕ್ಷಣ ಸೌಲಭ್ಯಕ್ಕೆ ಸಂಸಾರವನ್ನು ಗುರುತಿಸಿತು. ಮೂವತ್ತು ವರ್ಷ ದಾಟಿಯೂ ಮದುವೆಯಾವದೆ ಉಳಿದಿರುವ ಸಂಸಾರದ ಹೆಣ್ಣುಮಗಳಿಗೆ ಟಾಲೆಂಟ್ ರಿಸರ್ಚ್ ಫೌಂಡೇಶನ್ ಐದು ಪವನ್ ಚಿನ್ನ ಮತ್ತು ವಾಚ್ ನೀಡಿದರೆ, ಬಿ- ಹ್ಯೂಮನ್ ಸದಸ್ಯರು ಮದುವೆ ವಸ್ತ್ರ ನೀಡಿತು.

ಪ್ರಸಿದ್ದ ಬರಹಗಾರ ಹಾರಿಸ್ ಸ್ನೇಹಜೀವಿಯವರ ಕೋರಿಕೆಯ ಮೇರೆಗೆ ಇನ್ನೊಂದು ಬಡ ಸಂಸಾರದ ಹೆಣ್ಣುಮಗಳ ಮದುವೆಗೆ ನೆರವು ನೀಡಲಾಯಿತು. ಆ ಮನೆಯಲ್ಲಿ ತಾಯಿಯ ಜೊತೆ ವಾಸಿಸುವ ನಾಲ್ಕು ಯುವತಿಯರಲ್ಲಿ ಇಬ್ಬರಿಗೆ ಶಿಕ್ಷಣ ನೆರವು ನೀಡುವ ಭರವಸೆಯನ್ನು ಹಿದಾಯ ಪೌಂಡೇಶನ್ ಮಾಡಿತು.

ಸ್ನೇಹಾಲಯದ ಜೋಸೆಫ್ ಕ್ರಾಸ್ತಾರ ಸೇವೆ ಅನನ್ಯ. ಜೋಸೆಫರು ದೇವರ ಸೇವೆಯನ್ನು ಮಾಡುತ್ತಿದ್ದಾರೆ. ಇಂತಹ ಕೆಲಸ ಮಾಡಲು ಸಾವಿರ ಪುಣ್ಯಾತ್ಮರ ಹೃದಯಬೇಕು. ಇದು ನಮ್ಮಂತಹ ಒಂದು ಹೃದಯದಿಂದ ಆಗುವಂತದ್ದಲ್ಲ.

- ಆಸಿಫ್ ಡೀಲ್ಸ್, ಬಿ- ಹ್ಯೂಮನ್ ಸಂಸ್ಥೆಯ ಸ್ಥಾಪಕ

ಮನುಷ್ಯ ಸೇವೆಯಲ್ಲಿ ಮಾನವನ ಕಷ್ಟವನ್ನು ನೋಡಬೇಕೇ ಹೊರತು, ಧರ್ಮವನ್ನಲ್ಲ, ಬಿ-ಹ್ಯೂಮನ್ ಮಂಗಳೂರಿನ ಸೌಹಾರ್ದ ಜೀವಂತ ಇರಿಸುವ ಪ್ರಯತ್ನ ಮಾಡಲಾಗಿದೆ. ಪ್ರವಾದಿ ಮುಹಮ್ಮದ್‌ರ ಜನ್ಮದಿನದ ಈ ತಿಂಗಳು ಅವರ ಸಂದೇಶವನ್ನು ಪ್ರಾಯೋಗಿಕಗೊಳಿಸಿ ನೆರೆಕರೆಯ ಸಹೋದರನ ಸಂಸಾರದ ಕಣ್ಣೀರು ಒರೆಸಿದೆ ಎಂದರು.

- ಮುಝಪ್ಪರ್ ಅಹ್ಮದ್, ಹೈಕೋರ್ಟ್ ನ್ಯಾಯವಾದಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News