ಬೊಮ್ಮರಬೆಟ್ಟು ಗ್ರಾಪಂ ಅಭಿವೃದ್ಧಿಗೆ ಬಿಜೆಪಿ ಬೆಂಬಲಿತ ಸದಸ್ಯರ ತಡೆ: ಅಧ್ಯಕ್ಷೆ ಮಾಲತಿ ಆಚಾರ್ಯ ಆರೋಪ

Update: 2018-11-12 16:45 GMT

ಉಡುಪಿ, ನ.12: ಬೊಮ್ಮರಬೆಟ್ಟು ಗ್ರಾಪಂ ವ್ಯಾಪ್ತಿಯಲ್ಲಿ ನಡೆಸಿರುವ ಅಭಿವೃದ್ಧಿಯನ್ನು ನೋಡಿ ಸಹಿಸಲಾಗದ ಬಿಜೆಪಿ ಬೆಂಬಲಿತ ಸದಸ್ಯರು, ವಿವಿಧ ರೀತಿಯ ತಡೆಗಳನ್ನು ಒಡ್ಡುತಿದ್ದಾರೆ. ಇದೀಗ ಅಕ್ರಮವಾಗಿ ತನ್ನನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಈ ಬಗ್ಗೆ ತಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಅಧ್ಯಕ್ಷೆ ಮಾಲತಿ ಬಿ.ಆಚಾರ್ಯ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ತನ್ನ ನೋವು ತೋಡಿಕೊಂಡ ಅಧ್ಯಕ್ಷರು, 40ನೇ ಬೊಮ್ಮರಬೆಟ್ಟು ಗ್ರಾಪಂನಲ್ಲಿ ಮಾಜಿ ಶಾಸಕ ವಿನಯಕುಮಾರ್ ಸೊರಕೆ ಅವರ ಶಿಫಾರಸ್ಸಿನ ಮೇರೆಗೆ ಜಿಪಂ, ತಾಪಂ ಹಾಗೂ ಗ್ರಾಪಂ ಸದಸ್ಯರ ಅನುದಾನವನ್ನು ಬಳಸಿ ಸುಮಾರು 18 ಕೋಟಿ ರೂ.ಗೂ ಅಧಿಕ ಅನುದಾನದಿಂದ ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ನಡೆಸಿರುವ ತೃಪ್ತಿ ತನಗಿದೆ ಎಂದರು.

ಕಳೆದ ಮೂರು ವರ್ಷಗಳಿಂದ ತಾನು ನಡೆಸಿರುವ ಅಭಿವೃದ್ಧಿ ಕಾರ್ಯವನ್ನು ನೋಡಿ ಸಹಿಸಲಾಗದ ಬಿಜೆಪಿ ಬೆಂಬಲಿತ ಸದಸ್ಯರು ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯದ ವಿರುದ್ಧ ಬಿಜೆಪಿ ಬೆಂಬಲಿತ ನಾಗರಿಕರ ಮೂಲಕ ತಾಪು ಅಧ್ಯಕ್ಷರ ನ್ಯಾಯಾಲಯಕ್ಕೆ ದೂರು ನೀಡಿ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಇದರಿಂದಾಗಿ ಗ್ರಾಮದ ನೂತನ ಬಸ್ ತಂಗುದಾಣದ ನಿರ್ಮಾಣ, ಅಂಗಡಿ ಕೋಣೆಗಳ ಏಲಂ ಹಾಗೂ ಮಾರ್ಕೆಟ್ ಏಲಂಗೆ ತಡೆ ಬಿದ್ದಿದೆ. ಯಾವುದೇ ಅಭಿವೃದ್ಧಿ ಕೆಲಸದ ಬಗ್ಗೆ ವಿಚಾರಣೆ ನಡೆಸದೇ ರಾಜಕೀಯವಾಗಿ ತಡೆಯಾಜ್ಞೆ ನೀಡುತ್ತಿರುವ ತಾಪಂ ಅಧ್ಯಕ್ಷರ ಕ್ರಮದಿಂದ ಗ್ರಾಪಂಗೆ ಲಕ್ಷಾಂತರ ರೂ. ನಷ್ಟ ಉಂಟಾಗುತ್ತಿದೆ. ರಾಜಕೀಯ ಧ್ವೇಷದಿಂದ ಸ್ಥಳೀಯ ಸಂಸ್ಥೆಯ ಮೇಲೆ ಸವಾರಿ ಮಾಡುತ್ತಿರುವುದು ಖಂಡನೀಯ ಎಂದು ಮಾಲತಿ ಆಚಾರ್ಯ ಹೇಳಿದರು.

ಹೇಗಾದರೂ ಮಾಡಿ ಅಧ್ಯಕ್ಷ ಸ್ಥಾನದಿಂದ ತನ್ನನ್ನು ಕೆಳಗಿಳಿಸುವ ಸಲುವಾಗಿ ಬಿಜೆಪಿ ಬೆಂಬಲಿತ ಸದಸ್ಯರು ತನ್ನ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿ ಕುಂದಾಪುರದ ಸಹಾಯಕ ಕಮಿಷನರ್‌ಗೆ ದೂರು ನೀಡಿದ್ದು, ಇದರ ತನಿಖೆ ನಡೆಸಿದ ಅವರು ಎಲ್ಲಾ ಕಾಮಗಾರಿಗಳೂ ನಿಯಮ ಬದ್ಧವಾಗಿ ನಡೆದಿರುವ ಬಗ್ಗೆ, ಅಧ್ಯಕ್ಷರಿಂದ ಯಾವುದೇ ಲೋಪವಾಗಲಿ, ಭ್ರಷ್ಟಾಚಾರವಾಗಲೀ ನಡೆದಿಲ್ಲ ಎಂದು ವರದಿಯನ್ನು ಸಲ್ಲಿಸಿದ್ದಾರೆ ಎಂದರು.

ಆದರೂ ತನ್ನ ಮೇಲೆ ಸಾಮಾಜಿಕ ಜಾಲತಾಣಗಳ ಮೂಲಕ ಇಲ್ಲಸಲ್ಲದ ಆರೋಪ ಹೊರಿಸಿ ತನ್ನ ತೇಜೊವಧೆ ಮಾಡಲಾಗುತ್ತಿದೆ ಎಂದು ಮಾಲತಿ ಆಚಾರ್ಯ ಆರೋಪಿಸಿದರು. ಈ ನಡುವೆ ಕಾಪು ಶಾಸಕ ಲಾಲಾಜಿ ಮೆಂಡನ್ ಅವರೂ ಬಿಜೆಪಿ ಬೆಂಬಲಿತ ಸದಸ್ಯರ ಒತ್ತಡಕ್ಕೆ ಮಣಿದು ಅಭಿವೃದ್ಧಿಗೆ ತೊಡರುಗಾಲು ಹಾಕುತಿದ್ದಾರೆ ಎಂದು ಗ್ರಾಪಂ ಅಧ್ಯಕ್ಷರು ನುಡಿದರು.

ಅಧ್ಯಕ್ಷ ಸ್ಥಾನದಿಂದ ತನ್ನನ್ನು ಕೆಳಗಿಸುವ ಕೊನೆಯ ಪ್ರಯತ್ನವಾಗಿ ಗ್ರಾಪಂನ ಕೆಲವು ಸದಸ್ಯರನ್ನು ಖರೀದಿಸಿ, ತನ್ನ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಬೇಡಿಕೆ ಸಲ್ಲಿಸಿದ್ದು, ನ.14ರಂದು ಇದು ಮಂಡನೆಯಾಗಲಿದೆ. 21ಸದಸ್ಯರ ಗ್ರಾಪಂನಲ್ಲಿ ಬಹುಪಾಲು ಸದಸ್ಯರು ಈಗ ಬಿಜೆಪಿ ಬೆಂಬಲಿಸುತ್ತಿರುವುದರಿಂದ ತಾನು ಸೋತರೂ, ಗೆದ್ದರೂ ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಜನಸೇವೆ ಮಾಡಲು ಅಧಿಕಾರವೇ ಬೇಕೆಂದಿಲ್ಲ ಎಂದು ನಾನು ನಂಬಿರುವುದಾಗಿ ಮಾಲತಿ ಆಚಾರ್ಯ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹಿರಿಯಡ್ಕ ಜಿಪಂ ಸದಸ್ಯೆ ಚಂದ್ರಿಕಾ ಕೇಳ್ಕರ್, ತಾಪಂ ಸದಸ್ಯ ಲಕ್ಷ್ಮೀನಾರಾಯಣ ಪ್ರಭು, ಗ್ರಾಪಂ ಸದಸ್ಯರಾದ ವಿನೋದ್ ಕುಮಾರ್, ಸುರೇಶ್ ನಾಯಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News