ಚಿಕಿತ್ಸೆಯಿಂದ ಎಚ್‌ಐವಿಪೀಡಿತರು ವಂಚಿತರಾಗದಂತೆ ಎಚ್ಚರಿಕೆ ವಹಿಸಿ: ಸಿಇಒ ಡಾ.ಸೆಲ್ವಮಣಿ

Update: 2018-11-13 17:13 GMT

ಮಂಗಳೂರು, ನ.13: ಜಿಲ್ಲೆಯಲ್ಲಿರುವ ಎಚ್‌ಐವಿಪೀಡಿತರು ಚಿಕಿತ್ಸೆ ಮತ್ತು ಇತರ ಸೌಲಭ್ಯಗಳಿಂದ ವಂಚಿತರಾಗದಂತೆ ಮುನ್ನೆಚ್ಚರಿಕೆ ವಹಿಸಿ ಕಾರ್ಯೋನ್ಮುಖರಾಗುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸೆಲ್ವಮಣಿ ಆರ್. ಸೂಚನೆ ನೀಡಿದರು.

ಜಿಪಂ ಕಚೇರಿಯಲ್ಲಿ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕವು ಮಂಗಳವಾರ ಆಯೋಜಿಸಿದ್ದ ಎಚ್‌ಐವಿ/ಟಿಬಿ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಸುಮಾರು 6000ದಷ್ಟು ಎಚ್‌ಐವಿಪೀಡಿತರನ್ನು ಗುರುತಿಸಲ್ಪಟ್ಟವರಿಗೆ ಸೂಕ್ತ ಸೌಲಭ್ಯ ಹಾಗೂ ಚಿಕಿತ್ಸೆಯನ್ನು ಒದಗಿಸಬೇಕು. ಖಾಸಗಿ ಪ್ರಯೋಗಶಾಲೆ, ಕೆಎಂಸಿ ಆಸ್ಪತ್ರೆಯಲ್ಲಿ ಪತ್ತೆಯಾಗುವ ಎಚ್‌ಐವಿ ಸೋಂಕಿತರ ವಿವರಗಳನ್ನು ಕಡ್ಡಾಯವಾಗಿ ಡ್ಯಾಪ್ಕೊ ಕಚೇರಿಗೆ ಸಲ್ಲಿಸಬೇಕು ಎಂದರು.

ಕಳೆದ ಸಮನ್ವಯ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಪರಿಶೀಲಿಸಿದ ಸಿಇಒ, ಯೋಜನೆಗಳ ಅನುಷ್ಠಾನದಲ್ಲಾದ ವ್ಯತ್ಯಯ ಹಾಗೂ ಸಮಗ್ರ ಹಾಗೂ ಸಮರ್ಪಕ ಮಾಹಿತಿ ನೀಡದ ಬಗ್ಗೆ ಏಡ್ಸ್ ನಿಯಂತ್ರಣಾಧಿಕಾರಿಗಳ ಕಾರ್ಯನಿರ್ವಹಣೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ಸಭೆಗೆ ಸಮಗ್ರ ಮಾಹಿತಿಯೊಂದಿಗೆ ಹಾಜರಾಗಲು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಏಡ್ಸ್ ತಡೆ ಮತ್ತು ನಿಯಂತ್ರಣ ಘಟಕದಡಿ ಕಾರ್ಯಾಚರಿಸುತ್ತಿರುವ ಸರಕಾರೇತರ ಸಂಘಸಂಸ್ಥೆಗಳು ಮತ್ತು ಸಮುದಾಯ ಆಧಾರಿತ ಸಂಸ್ಥೆಗಳ ಪ್ರತಿನಿಧಿಗಳು ಮಾತನಾಡಿ, ಖಾಸಗಿ ಆಸ್ಪತ್ರೆಗಳಲ್ಲಿ ಲ್ಯಾಬ್ ಟೆಕ್ನಿಷಿಯನ್ ಅಗತ್ಯದ ಬಗ್ಗೆ ಗಮನಸೆಳೆದರು. ರೋಗಪೀಡಿತರಿಗೆ ಕಳೆದ ನಾಲ್ಕು ತಿಂಗಳಿಂದ ನೆವಿರಾಪಿನ್ ಮಾತ್ರೆ ಸಿಗುತ್ತಿಲ್ಲ ಎಂದು ಹೇಳಿದರು.

ಸಂಬಂಧ ಪಟ್ಟವರಲ್ಲಿ ತಕ್ಷಣವೇ ಸೂಚನೆ ನೀಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಸಿಇಒ, ಗ್ರಾಮೀಣ ವಸತಿ ಯೋಜನೆಯಡಿ ಎಚ್‌ಐವಿ ಪಾಸಿಟಿವ್ ರೋಗಿಗಳಿಗೆ ವಸತಿ ಒದಗಿಸುವ ಬಗ್ಗೆ ಮನೆ ಮತ್ತು ನಿವೇಶನ ಇಲ್ಲದವರ ಪ್ರತ್ಯೇಕ ಪಟ್ಟಿ ತಯಾರಿಸಿ ನೀಡಲು ಎನ್‌ಜಿಒ ಪ್ರತಿನಿಧಿಗಳಿಗೆ ಸಿಇಒ ಹೇಳಿದರು.
ಹಲವರಿಗೆ ರೇಷನ್ ಕಾರ್ಡ್ ಇಲ್ಲದೆ ಸೌಲಭ್ಯ ವಂಚಿತರಾಗಿದ್ದಾರೆಂದು ಪ್ರತಿನಿಧಿಗಳು ಗಮನಸೆಳೆದಾಗ, ನಿಗದಿತ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದರೆ ರೇಷನ್ ಕಾರ್ಡ್ ಹಾಗೂ ಆಧಾರ್ ಒದಗಿಸಲು ಖುದ್ದು ನೆರವು ನೀಡುವುದಾಗಿ ಹೇಳಿದರು.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಚ್‌ಐವಿ ಪೀಡಿತರಿಗೆ ಅರಿವು ಕಾರ್ಯಕ್ರಮ ಆಯೋಜಿಸುವ ಬಗ್ಗೆ ಅವರಿಗೆ ಎಆರ್‌ಟಿಯಲ್ಲಿ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಇಒ, ವಲಸೆ ಕಾರ್ಮಿಕರ ಬಗ್ಗೆ, ಟ್ರಕ್ ಚಾಲಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಸೂಚನೆ ನೀಡಿದರು. ಇಲ್ಲೂ ವಸತಿರಹಿತರ ಮಾಹಿತಿ ನೀಡಿದರೆ ಡಿಯುಡಿಸಿ ಮೂಲಕ ವಸತಿ ನಿರ್ಮಾಣಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲು ಅವಕಾಶವಿದೆ. ಎಚ್‌ಐವಿ ಪೀಡಿತ ಮಕ್ಕಳಿಗೆ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಸೇರ್ಪಡೆಗೆ ಅವಕಾಶವಿದೆ ಎಂದೂ ಸಿಇಒ ಅವರು ಸಭೆಯಲ್ಲಿ ಹೇಳಿದರು.

ಕಳಂಕ ತಾರತಮ್ಯ ಹೋಗಲಾಡಿಸುವ ನಿಟ್ಟಿನಲ್ಲಿ ಎಚ್‌ಐವಿ ಕಾನೂನನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಹಾಗೂ ಬಹುಮಾಧ್ಯಮದ ಮೂಲಕ ಈ ಸಂಬಂಧ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲು ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸಿಇಒ ಸೂಚಿಸಿದರು. ರೋಗ ಹರಡುವ ವಲ್ನರೇಬಲ್ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣಕ್ಕೆ ಒತ್ತು ನೀಡಿ ಎಂದ ಸಿಇಒ ಡಾ.ಸೆಲ್ವಮಣಿ, ಮುಂದಿನ ಸಭೆಗೆ ಸಮಗ್ರ ಮಾಹಿತಿಯೊಂದಿಗೆ ಹಾಜರಾಗಲು ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News