ಡಿ.1ರಂದು ಹುಬ್ಬುರ್ರಸೂಲ್ ಕಾರ್ಯಕ್ರಮ
ಮಂಗಳೂರು, ನ.15: ಸುನ್ನೀ ಸಂದೇಶ ಪತ್ರಿಕೆ ತನ್ನ 17ನೇ ವಾರ್ಷಿಕ ಸಮಾರಂಭ ಮತ್ತು ಪ್ರವಾದಿ ಮುಹಮ್ಮದ್ರವರ ಜನ್ಮ ದಿನಾಚರಣೆಯ ಅಂಗವಾಗಿ ಡಿ.1ರಂದು ಸಂಜೆ 4.30ರಿಂದ ರಾತ್ರಿ 10.30ರವರೆಗೆ ಹುಬ್ಬುರ್ರಸೂಲ್ ಕಾರ್ಯಕ್ರಮವನ್ನು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಆಯೋಜಿಸಿದೆ ಎಂದು ಸ್ವಾಗತ ಸಮಿತಿಯ ಅಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಮಜ್ಲಿಸುನ್ನೂರು, ಸೌಹಾರ್ದ ಸಂಗಮ ಹಾಗೂ ಅಂತಾರಾಷ್ಟ್ರೀಯ ವಾಗ್ಮಿ ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಹುಬ್ಬುರ್ರಸೂಲ್ ಪ್ರಭಾಷಣ ನಡೆಸಿಕೊಡಲಿದ್ದಾರೆ ಎಂದರು.
ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜಿಲ್ಲೆಯ ಪ್ರತಿಷ್ಟಿತ ನಾಯಕರನ್ನು ಒಳಗೊಂಡ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ. ನ.23ರಿಂದ ಜಿಲ್ಲೆಯಾದ್ಯಂತ ವಾಹನ ಜಾಥಾಗಳ ಮೂಲಕ ಪ್ರಚಾರ ಕಾರ್ಯ ನಡೆಯಲಿದೆ. ಗಿಡ ಮರ ಬೆಳೆಸಿ-ಮಾದಕ ವ್ಯಸನ ನಿಲ್ಲಿಸಿ ಎಂಬ ಧ್ಯೇಯ ವಾಕ್ಯದೊಂದಿಗೆ ಜಿಲ್ಲೆಯಾದ್ಯಂತ ಮಾದಕ ವ್ಯಸಗಳ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯ ಆಗಲಿದೆ. ಕಾರ್ಯಕ್ರಮದಲ್ಲಿ ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಗಣ್ಯರು ಭಾಗವಹಿಲಿದ್ದಾರೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಮನ್ಸೂರ್ ಅಹಮದ್, ಕೋಶಾಧಿಕಾರಿ ಝಕರಿಯಾ ಜೋಕಟ್ಟೆ ಅಲ್ ಮುಝೈನ್, ಉಪಾಧ್ಯಕ್ಷರಾದ ಎಸ್.ಎಂ.ಮುಸ್ತಾಫಾ, ಸಿತಾರ್ ಮಜೀದ್ ಉಪಸ್ಥಿತರಿದ್ದರು.