ಪ್ರವಾದಿ ಮುಹಮ್ಮದ್‌ರ ಜನ್ಮ ತಿಂಗಳ ಪ್ರಯುಕ್ತ ನ.16ರಿಂದ ರಾಜ್ಯಾದ್ಯಂತ ಸೀರತ್ ಅಭಿಯಾನ

Update: 2018-11-15 12:59 GMT

ಮಂಗಳೂರು, ನ.15: ಪ್ರವಾದಿ ಮುಹಮ್ಮದ್‌ರ ಜನ್ಮ ತಿಂಗಳ ಪ್ರಯುಕ್ತ ಕನ್ನಡ ನಾಡಿನ ಜನತೆಗೆ ಪ್ರವಾದಿವರ್ಯರ ಸಂದೇಶ ಮತ್ತು ಪ್ರತಿಪಾದಿಸಿದ ಮಾನವೀಯ ಮೌಲ್ಯಗಳನ್ನು ಪರಿಚಯಿಸಲು ರಾಜ್ಯಾದ್ಯಂತ ‘ಪ್ರವಾದಿ ಮುಹಮ್ಮದ್ ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’ ಎಂಬ ವಿಷಯದಲ್ಲಿ ನ.16ರಿಂದ 30ರವರೆಗೆ ಸೀರತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸೀರತ್ ಅಭಿಯಾನ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಕುಂಞಿ ತಿಳಿಸಿದ್ದಾರೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾದಿ ಶಿಕ್ಷಣದ ಪ್ರಸ್ತುತತೆ ಸಮಾಜದಲ್ಲಿ ಚರ್ಚಾ ವಿಷಯವಾಗಿ ಪರಸ್ಪರ ಅರಿತುಕೊಂಡು ಬಾಳುವುದರ ಜೊತೆಗೆ ಆರೋಗ್ಯಯುತ ಸಮಾಜವನ್ನು ನಿರ್ಮಿಸಲು ಸೀರತ್ ಅಭಿಯಾನವನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ಅಭಿಯಾನದ ಅಂಗವಾಗಿ ವಿಚಾರಗೋಷ್ಠಿ, ಸಾರ್ವಜನಿಕ ಸಭೆ, ಸೀರತ್ ಪ್ರವಚನ, ಸದ್ಭಾವನಾ ಸಮಾವೇಶ, ಚಹಾಕೂಟಗಳು, ಪುಸ್ತಕ ಬಿಡುಗಡೆ, ಗಣ್ಯರ ಭೇಟಿ, ಮೊಹಲ್ಲಾ ಸಭೆಗಳು, ಶಿಕ್ಷಕರಿಗೆ ಪ್ರಬಂಧ ಸ್ಪರ್ಧೆ, ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ, ವಸ್ತು ಪ್ರದರ್ಶನ, ವಾಹನ ಜಾಥಾ, ಬೀದಿ ನಾಟಕ, ಮಹಿಳಾ ಸಮಾವೇಶ, ಮಕ್ಕಳ ಕಾರ್ಯಕ್ರಮ, ಶುಚಿತ್ವ ಅಭಿಯಾನ, ಪ್ರಕೃತಿ ಸಂರಕ್ಷಣೆ, ಸಮಾಜ ಸೇವಾ ಕಾರ್ಯಗಳು ಸೇರಿದಂತೆ ಇನ್ನಿತರ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.

ನ.28ರಂದು ಸಂಜೆ 5 ಗಂಟೆಗೆ ನಗರದ ಪುರಭವನದಲ್ಲಿ ‘ಸಮಾಜ ಸುಧಾರಣೆ ಪ್ರವಾದಿ ಮುಹಮ್ಮದ್‌ರ ಶಿಕ್ಷಣದ ಬೆಳಕಿನಲ್ಲಿ’ ಎಂಬ ವಿಷಯದಲ್ಲಿ ವಿಚಾರಗೋಷ್ಠಿ ನಡೆಯಲಿದೆ. ವಿಚಾರಗೋಷ್ಠಿಗೆ ಅತಿಥಿಗಳಾಗಿ ಉತ್ತರಪ್ರದೇಶ ರಾಜ್ಯದ ಲಕ್ನೋದ ಶಂಕರಾಚಾರ್ಯ ಸ್ವಾಮೀಜಿ, ಜಮಾಅತೆ ಹಿಂದ್ ರಾಷ್ಟ್ರೀಯ ಕಾರ್ಯದರ್ಶಿ ಮೌಲಾನಾ ಮುಹಮ್ಮದ್ ಇಕ್ಬಾಲ್ ಮುಲ್ಲಾ, ಕಾದಂಬರಿಕಾರ ಕುಂ.ವೀರಭದ್ರಪ್ಪ, ಪ್ರಜಾವಾಣಿ ದಿನಪತ್ರಿಕೆಯ ಹಿರಿಯ ಉಪಸಂಪಾದಕ ಬಿ.ಎಂ.ಹನೀಫ್, ಶಾಂತಿ ಪ್ರಕಾಶನದ ಅಧ್ಯಕ್ಷ ಮುಹಮ್ಮದ್ ಅತ್ಹರುಲ್ಲಾ ಶರೀಫ್, ಮಂಗಳೂರು ವಿವಿ ಕನ್ನಡ ಪ್ರಾಧ್ಯಾಪಕ ಪ್ರೊ.ಬಿ.ಶಿವರಾಮ್ ಶೆಟ್ಟಿ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಜಿಲ್ಲೆಯ ಶಿಕ್ಷಕ/ ಶಿಕ್ಷಕಿಯರಿಗಾಗಿ ‘ಪ್ರವಾದಿ ಮುಹಮ್ಮದ್ ನನ್ನ ದೃಷ್ಟಿಯಲ್ಲಿ’ ಎಂಬ ವಿಷಯದಲ್ಲಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಪ್ರಥಮ ಬಹುಮಾನ 25 ಸಾವಿರ, ದ್ವೀತಿಯ ಬಹುಮಾನ 15 ಸಾವಿರ, ತೃತೀಯ ಬಹುಮಾನ 10 ಸಾವಿರ ರೂ. ನಿಗದಿ ಪಡಿಸಲಾಗಿದೆ ಎಂದರು.
ಜಿಲ್ಲೆಯ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ‘ಪ್ರವಾದಿ ಮುಹಮ್ಮದ್ ನಾ ಕಂಡಂತೆ’ ಎಂಬ ವಿಷಯದಲ್ಲಿ ಭಾಷಣ ಸ್ಪರ್ಧೆಯನ್ನು ಆಯೋಜಿಸಲಿದ್ದು, ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ 10 ಸಾವಿರ, ದ್ವಿತೀಯ ಬಹುಮಾನ 7,000, ತೃತೀಯ ಬಹುಮಾನ 5,000 ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮೊದಲ ಬಹುಮಾನ 5,000, ಎರಡನೇ ಬಹುಮಾನ 3,000, ಮೂರನೇ ಬಹುಮಾನ 2,000 ರೂ. ಎಂದು ನಿರ್ಧರಿಸಲಾಗಿದೆ. ಸ್ಪರ್ಧೆಯಲ್ಲಿ ಜಾತಿ-ಮತ ಭೇದವಿಲ್ಲದೇ ಎಲ್ಲರೂ ಭಾಗವಹಿಸಬಹುದಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸೀರತ್ ಅಭಿಯಾನ ಸ್ವಾಗತ ಸಮಿತಿಯ ಅಧ್ಯಕ್ಷ ಡಾ.ಸಿ.ಪಿ.ಹಬೀಬ್ ರಹ್ಮಾನ್, ಉಪಾಧ್ಯಕ್ಷ ಪಿ.ಬಿ.ಅಬ್ದುಲ್ ಹಮೀದ್, ಕಾರ್ಯದರ್ಶಿಗಳಾದ ವೈ.ಮುಹಮ್ಮದ್ ಬ್ಯಾರಿ, ನಾಝಿಮ್, ಕೋಶಾಧಿಕಾರಿ ಇಲ್ಯಾಸ್ ಇಸ್ಮಾಯೀಲ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News