ಮರಳು ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವಂತೆ ಒತ್ತಾಯ

Update: 2018-11-15 16:44 GMT

ಬಂಟ್ವಾಳ, ನ. 15: ದ.ಕ.ಜಿಲ್ಲೆಯಲ್ಲಿ ತಲೆದೋರಿರುವ ಮರಳು ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವಂತೆ ಹಾಗೂ ಮರಳು ನೀತಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ನ. 19ರಂದು ಬೆಳಿಗ್ಗೆ 10ಕ್ಕೆ ಬಿ.ಸಿ.ರೋಡ್ ಮಿನಿವಿಧಾನ ಸೌಧದ ಮುಂಭಾಗದಲ್ಲಿ ಧರಣಿ ನಡೆಸಲಾಗುವುದು ಎಂದು ಕಟ್ಟಡ ಕಾರ್ಮಿಕ ಫೆಡರೇಶನ್ (ಸಿಐಟಿಯು) ಬಂಟ್ವಾಳ ತಾಲೂಕು ಸಮಿತಿ ಕಾರ್ಯದರ್ಶಿ ರಾಮಣ್ಣ ವಿಟ್ಲ ತಿಳಿಸಿದ್ದಾರೆ.

ಅವರು ಗುರುವಾರ ಬಿ.ಸಿ.ರೋಡಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಹಲವು ತಿಂಗಳುಗಳಿಂದ ಕರಾವಳಿ ಜಿಲ್ಲೆಯಲ್ಲಿ ಮರಳು ಸಮಸ್ಯೆ ತೀವ್ರ ವಾಗಿ ಉಲ್ಬಣಗೊಂಡಿದೆ. ಜಿಲ್ಲೆಯ ನದಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮರಳು ದೊರೆಯುತ್ತಿದ್ದರೂ ಜನಸಾಮಾನ್ಯರ ಕಾಮಗಾರಿಗೆ ಪೂರೈಕೆಯಾಗುತ್ತಿಲ್ಲ. ಇದರಿಂದ ಕಟ್ಟಡ ಕಾರ್ಮಿಕರು ಮಾತ್ರವಲ್ಲದೆ, ಸಣ್ಣಗುತ್ತಿಗೆದಾರರು ಕೂಡಾ ಸಂಕಷ್ಟಕ್ಕೊಳಗಾಗಿದ್ದಾರೆ ಎಂದು ಹೇಳಿದರು.

ಹೊರ ರಾಜ್ಯ ಹಾಗೂ ಜಿಲ್ಲೆಗಳಿಗೆ ಯಾವುದೇ ಅಡೆತಡೆಯಿಲ್ಲದೆ ಮರಳು ಪೂರೈಕೆಯಾಗುತ್ತಿದೆ. ಜಿಲ್ಲಾಡಳಿತವು ವಿಳಂಬ ನೀತಿ ಅನುಸರಿಸುವ ಮೂಲಕ ಸಂಪೂರ್ಣವಾಗಿ ಮರಳು ಮಾಫಿಯಾಕ್ಕೆ ಶರಣಾಗಿದೆ ಎಂದು ಆರೋಪಿದರು.

ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಂಸದ, ಎಲ್ಲ ಶಾಸಕರ ಜೊತೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸೂಕ್ತ ಮರಳು ನೀತಿ ಜಾರಿಗೊಳಿಸಲಿ ಎಂದವರು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಿಐಟಿಯು ತಾಲೂಕು ಅಧ್ಯಕ್ಷ ಉದಯ ಕುಮಾರ್ ಬಂಟ್ವಾಳ, ಉಪಾಧ್ಯಕ್ಷ ಸುರೇಂದ್ರ,  ಕೋಶಾಧಿಕಾರಿ ಮುಹಮ್ಮದ್ ಹನೀಫ್, ಸದಸ್ಯರಾದ ಗಣೇಶ್ ಪ್ರಭು, ಗಣೇಶ್ ಸುವರ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News