ನ.17: ಬ್ಯಾರಿ ಸಾಹಿತ್ಯ ಕಮ್ಮಟ- ಬ್ಯಾರಿ ಪ್ರತಿಭಾ ಕಾರಂಜಿ
ಮಂಗಳೂರು, ನ.15: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯಿಂದ ಉಳ್ಳಾಲದ ಅಳೇಕಲ ಮದನಿ ಎಜುಕೇಶನ್ ಅಸೋಸಿಯೇಶನ್ ಸಹಕಾರದೊಂದಿಗೆ ‘ಬ್ಯಾರಿ ಸಾಹಿತ್ಯ ಕಮ್ಮಟ ಮತ್ತು ಬ್ಯಾರಿ ಪ್ರತಿಭಾ ಕಾರಂಜಿ’ ಕಾರ್ಯಕ್ರಮವನ್ನು ನ.17ರಂದು ಬೆಳಗ್ಗೆ 9:30ಕ್ಕೆ ಅಳೇಕಲ, ಉಳ್ಳಾಲದ ಮದನಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಕರಂಬಾರ್ ಮುಹಮ್ಮದ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕೇಂದ್ರ ಜುಮ್ಮಾ ಮಸೀದಿ ಮತ್ತು ಸೈಯದ್ ಮದನಿ ದರ್ಗಾ ಸಮಿತಿ ಉಳ್ಳಾಲ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಲಿದ್ದಾರೆ.
‘ವಾರ್ತಾಭಾರತಿ’ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಹಂಝ ಮಲಾರ್, ಲೇಖಕ ಇಸ್ಮತ್ ಪಜೀರ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಮದನಿ ಎಜುಕೇಶನ್ ಅಸೋಸಿಯೇಶನ್ ಉಪಾಧ್ಯಕ್ಷ ಇಬ್ರಾಹೀಂ ಕಾಸಿಮ್ ಯು., ಮದನಿ ಎಜುಕೇಶನ್ ಅಸೋಸಿಯೇಶನ್ ಕಾರ್ಯದರ್ಶಿ ಪಂಡಿತ್ ಮುಹಮ್ಮದ್, ಮದನಿ ಹೈಸ್ಕೂಲ್ ಮುಖ್ಯೋಪಾಧ್ಯಾಯ ಇಬ್ರಾಹೀಂ ಪಿ. ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬಳಿಕ ವಿದ್ಯಾರ್ಥಿಗಳಿಗಾಗಿ ಬ್ಯಾರಿ ಭಾಷಾ ಸಾಮರ್ಥ್ಯ, ಸಣ್ಣಕಥೆ ಮತ್ತು ಆಶುಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಅಪರಾಹ್ನ 3 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅಕಾಡಮಿಯ ಅಧ್ಯಕ್ಷ ಕರಂಬಾರ್ ಮುಹಮ್ಮದ್ ವಹಿಸಲಿದ್ದಾರೆ. ಮದನಿ ಎಜುಕೇಶನ್ ಅಸೋಸಿಯೇಶನ್ ಸಂಚಾಲಕ ಯು.ಎನ್. ಇಬ್ರಾಹೀಂ, ಉಳ್ಳಾಲ ನಗರಸಭೆ ಕೌನ್ಸಿಲರ್ಗಳಾದ ಯು.ಎ. ಇಸ್ಮಾಯೀಲ್, ಅಸ್ಗರ್ ಅಲಿ, ಮದನಿ ಪಿ.ಯು. ಕಾಲೇಜಿನ ಪ್ರಾಂಶುಪಾಲ ಹಾಜಿ ಬಿ.ಮೂಸಾ, ಮದನಿ ಎಜುಕೇಶನ್ ಅಸೋಸಿಯೇಶನ್ ಖಾಜಾಂಚಿ ಹಾಜಿ ಯು.ಪಿ. ಅರಬಿ ಮುಂತಾದವರು ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಪ್ರಕಟನೆಯಲ್ಲಿ ತಿಳಿಸಿದರು.