ಪೊಲೀಸರಿಂದ, ಗೂಂಡಾಗಳಿಂದ ಸದಾ ಶೋಷಣೆಗೆ ಒಳಗಾದವಳು ನಾನು: ಎ. ರೇವತಿ

Update: 2018-11-17 16:06 GMT

ಮೂಡುಬಿದಿರೆ, ನ. 17: ನಿಜವಾಗಿಯೂ ಈ ಸಮಾಜ ಸರಿಯಾಗಿಲ್ಲ, ಬಡವರಿಗೆ ಈ ಸಮಾಜದಲ್ಲಿ ಬದುಕು ಸಾಗಿಸುವುದು ದುಸ್ತರವಾಗಿರುವುದಲ್ಲದೆ ನನ್ನ ಈ ಭಾವನಾತ್ಮಕ ಮತ್ತು ದೈಹಿಕ ವೈಫಲ್ಯಗಳನ್ನು ಗಮನಿಸಿಕೊಳ್ಳುವಲ್ಲಿ ಪೊಲೀಸರಿಂದಲೂ, ಗೂಂಡಾಗಳಿಂದಲೂ ಸದಾ ಶೋಷಣೆಗೆ ಒಳಗಾದವಳು ನಾನು ಎಂದು ಮಂಗಳಮುಖಿ ರೇವತಿ, ಚೆನ್ನೈ ಖೇದ ವ್ಯಕ್ತ ಪಡಿಸಿದರು.

ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿಯಲ್ಲಿ ನನ್ನಕಥೆ ನಿಮ್ಮ ಜೊತೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತಮ್ಮ ಜೀವನದ ಕರಾಳ ಮುಖಗಳನ್ನು ಪ್ರೇಕ್ಷಕರ ಮಂದೆ ತೆರೆದಿಟ್ಟರು.

"ತಮಿಳುನಾಡಿನ ಮೂಲದವಳಾದ ನಾನು ಕನ್ನಡದಲ್ಲೇ ಮಾತಾಡುತ್ತೇನೆ, ತಪ್ಪಾದರೆ ಕ್ಷಮಿಸಬೇಕು" ಎಂದ ರೇವತಿ ಕನ್ನಡ ಪ್ರೇಮವನ್ನು ಮೆರೆಯುವ ಜೊತೆಗೆ ತಾನು ಜೀವನದಲ್ಲಿ ಮಂಗಳಮುಖಿಯಾಗಿ ಕಂಡುಂಡ ನೋವುಗಳನ್ನು ಪ್ರೇಕ್ಷಕರ ಮುಂದಿರಿಸಿದರು.

ಬಾಲ್ಯದಲ್ಲಿ ಶಾಲಾ ದಿನಗಳಲ್ಲಿ ಗುರುಗಳ ಮೂಲಕವೂ ತಾನು ಮಾನಸಿಕ ವೇದನೆಯನ್ನು ಅನುಭವಿಸಿದವಳು, ಸಹಪಾಠಿಗಳ ತುಂಟತನಕ್ಕೆ ಒಳಗಾದವಳು ಗಂಡಾಗಿ ಹುಟ್ಟಿ ಹೆಣ್ತನದ ಭಾವನೆಗಳನ್ನು ಇರಿಸಿಕೊಂಡ ನನ್ನ ಭಾವನೆಗಳಿಗೆ ಸ್ಪಂದಿಸುವವರಾರು ಇಲ್ಲ ಎಂಬ ಚಿಂತೆ, ಬೇಗುದಿಗೆ ಒಳಗಾದವಳು ನಾನು ಎಂದು ಅವರು ತಿಳಿಸಿದರು.

ಪ್ರೌಢ ಶಾಲಾ ದಿನಗಳ ಸಂದರ್ಭ ತಾನು ಗಂಡಾಗಿ ಓರ್ವ ಹುಡುಗನ್ನು ಪ್ರೀತಿಸಿದೆ. ಆ ಕ್ಷಣವೇ ನಾನು ಮೊದಲ ಕವನ ಬರೆದೆ, ಆದರೆ ಈವರೆಗೂ ತಾನು ಆ ಕವನವನ್ನು ಆತನಿಗೆ ನೀಡಲಿಲ್ಲ ಎಂದು ಹೇಳಿದರು. ಹತ್ತನೇ ತರಗತಿಯವರೆಗೆ ವಿದ್ಯಾಭ್ಯಾಸ ಪಡೆದ ನಾನು ಮಂಗಳಮುಖಿಯಾಗಿಯೇ ಮುಂದುವರಿಯಲು ಮನೆಬಿಟ್ಟು ದೆಹಲಿಯತ್ತ ಮುಖಮಾಡಿ ಮುಂದುವರಿದೆ, ಭಿಕ್ಷೆ ಬೇಡಲು ಹೋದೆ, ಅದನ್ನು ತನ್ನ ಗುರುಗಳ ಮಾರ್ಗದರ್ಶನದಿಂದಾಗಿ ದಕ್ಷಿಣೆಯಾಗಿ ಪರಿವರ್ತಿಸಿಕೊಂಡೆ ಎಂದು ಹೇಳಿದರು. ಮನೆಯವರ ದಬ್ಬಾಳಿಕೆಯಿಂದಾಗಿ ಆತ್ಮಹತ್ಯೆಗೂ ಮುಂದಾದೆ, ಯಾರೂ ಕೆಲಸ ನೀಡದ ಸಂದರ್ಭ ಹೊಟ್ಟೆ ಪಾಡಿಗಾಗಿ ಲೈಂಗಿಕ ಪ್ರವೃತ್ತಿಯನ್ನು ಮುಂದುವರಿಸಿದೆ ಎಂದು ಅವರು ಹೇಳಿದರು.

ನಗ್ನಳನ್ನಾಗಿಸಿದ ಕ್ಷಣ

ಬೆಂಗಳೂರಿನಲ್ಲಿ ತನ್ನಷ್ಟಕ್ಕೆ ತಾನು ನಡೆಯುತ್ತಿದ್ದೆ ನನ್ನನ್ನು ಪೊಲೀಸರು ಜೀಪಿನಲ್ಲಿ ಕೆರದುಕೊಂಡು ಹೋಗಿ ಕಾರಾಗೃಹದಲ್ಲಿ ದುಡಿಸಿಕೊಂಡಿದ್ದಲ್ಲದೆ ಬೇರೆ ಖೈದಿಗಳ ಮುಂದೆ ಅವಾಚ್ಯವಾಗಿ ನಿಂದಿಸಿ ನನ್ನನ್ನು ನಗ್ನಳನ್ನಾಗಿಸಿದ ಘಟನೆ ಮರೆಯಲಾಗದು ಎಂದ ಅವರು ಮಾನವೀಯತೆಗೆ ಎಲ್ಲಿದೆ ಬೆಲೆ ? ಎಂದು ಪ್ರಶ್ನಿಸಿದರು.

ಸಂಗಮ ಸಂಸ್ಥೆಯನ್ನು ಸೇರಿಕೊಂಡು ಸಮಾಜಮುಖಿ ಕೆಲಸಗಳಲ್ಲಿ ತನ್ನನ್ನು ತಾನುನು ತೊಡಗಿಸಿಕೊಂಡೆ, ಕವನ, ಪುಸ್ತಕಗಳನ್ನು ಬರೆಯುತ್ತಾ ಹೋದೆ ಎಂದ ಅವರು, ನಾವಿಂದು ನಮ್ಮ ಹಿರಿಯರು ನಮ್ಮ ತಲೆಯಲ್ಲಿ ತುಂಬಿಸಿದ ಕಟ್ಟ ವಿಚಾರದಲ್ಲೇ ಮುಂದುವರಿಯುತ್ತಿದ್ದೇವೆ. ಹಸಿವು, ನೋವಿಗೆ ಲಿಂಗವಿಲ್ಲದಿರುವಾಗ ಗಂಡು-ಹೆಣ್ಣೆಂಬ ಪರಿಕಲ್ಪನೆ ಯಾಕೆ ಎಂದು ಪ್ರಶ್ನಿಸಿದರು.

ಗಂಡು ಮಕ್ಕಳಿಗೂ ಕಿವಿಮಾತು ಹೇಳಿ

ಕೇವಲ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಮಾತ್ರ ನೈತಿಕ ಬೋಧನೆ ಮಾಡುವುದಲ್ಲ, ಗಂಡು ಮಕ್ಕಳಿಗೂ ಹೆತ್ತವರು ಬೋಧನೆಯನ್ನು ಮಾಡಬೇಕು. ಆಗ ಮಾತ್ರ ಈ ಸಮಾಜದಲ್ಲಾಗುವ ಅತ್ಯಾಚಾರಗಳನ್ನು ತಡೆಯಬಹುದು ಎಂದು ಹೇಳಿದರು.

ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷೆ ಡಾ. ಮಲ್ಲಿಕಾ. ಎಸ್. ಘಂಟಿ. ನುಡಿಸಿರಿ ಉಪಾಧ್ಯಕ್ಷ ಡಾ. ನಾ. ದಾಮೋದರ ಶೆಟ್ಟಿ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News