ನ.23ರಂದು ಮತದಾರರ ವಿಶೇಷ ನೋದಣಿ ಅಭಿಯಾನ
ಮಂಗಳೂರು, ನ.19: ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗಾಗಿ ನ.23, 24 ಮತ್ತು 25ರಂದು ಮತದಾರರ ವಿಶೇಷ ನೋಂದಣಿ ಅಭಿಯಾನ ನಡೆಯಲಿದೆ.
ಮತದಾರರ ಪಟ್ಟಿಗೆ ಹೆಸರು ಸೇರಿಸಲು ನ.20 ಕೊನೆಯ ದಿನವಾಗಿದ್ದು, ಈ ಹಿನ್ನೆಲೆ ವಿಕಲಚೇತನರು, ಮಹಿಳೆಯರು, ದುರ್ಬಲರು ಮತ್ತು ಯುವ ಮತದಾರರ ಅನುಕೂಲಕ್ಕಾಗಿ ಮತದಾರರ ಮಿಂಚಿನ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ನೋದಣಿ ಅಭಿಯಾನವು ಬೆಳಗ್ಗೆ 10ರಿಂದ ಸಂಜೆ 5:30ರವರೆಗೆ ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ನಡೆಯಲಿದೆ.
2019ರ ಜ.1ರ ಅರ್ಹತಾ ದಿನಾಂಕದಂತೆ 18 ವರ್ಷ ವಯೋಮಾನದ ಭಾರತೀಯ ಪ್ರಜೆಯಾಗಿರಬೇಕು. 18 ವರ್ಷ ಪೂರೈಸಿದ ಹೊಸ ಮತದಾರರು ಹಾಗೂ ಒಂದು ಕ್ಷೇತ್ರದಿಂದ ಮತ್ತೊಂದೆಡೆ ವಾಸಸ್ಥಳ ಬದಲಾಯಿಸಿದವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ನಮೂನೆ-6ಎ, ಅನಿವಾಸಿ ಭಾರತೀಯರು ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆ ಮಾಡಲು ನಮೂನೆ-7, ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕಲು ನಮೂನೆ-8, ಹೆಸರು, ತಂದೆಯ ಹೆಸರು, ಮನೆ ವಿಳಾಸ, ವಯಸ್ಸಿಗೆ ಹಾಗೂ ಭಾವಚಿತ್ರಕ್ಕೆ ಸಂಬಂಧಿಸಿದ ದೋಷಗಳಿದ್ದರೆ ಸರಿಪಡಿಸಿಕೊಳ್ಳಲು ನಮೂನೆ-8ಎ ಅಗತ್ಯವಿದೆ.
ಎಲ್ಲ ಬೂತ್ಮಟ್ಟದ ಅಧಿಕಾರಿಗಳು ನವೆಂಬರ್ 23, 24. ಮತ್ತು ದಿನಾಂಕ 25 ರಂದು ಪೂರ್ವಾಹ್ನ 10 ಗಂಟೆಯಿಂದ ಸಾಯಂಕಾಲ 5.30 ಗಂಟೆವರೆಗೆ ಮತಗಟ್ಟೆಯಲ್ಲಿ ಹಾಜರಿದ್ದು, ಅಲ್ಲಿಗೆ ಬರುವ ಸಾರ್ವಜನಿಕರ ಹೆಸರು ಮತದಾರರ ಪಟ್ಟಿಯಲ್ಲಿ ನೊಂದಾಯಿಸಲ್ಪಟ್ಟಿದೆಯೆ ಎಂಬುದನ್ನು ಪರಿಶೀಲಿಸಿ ಅರ್ಹ ಮತದಾರರಿಂದ ನಮೂನೆ-6 ನ್ನು ಸ್ವೀಕರಿಸುವುದು.
ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಮತ್ತು ಬೂತು ಮಟ್ಟದ ಅಧಿಕಾರಿಗಳ ತಂಡಗಳನ್ನು ರಚಿಸಿ, ತಮ್ಮ ತಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ಬರುವ ಎಲ್ಲ ಕಾಲೇಜುಗಳಿಗೆ ಭೇಟಿ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ನೋಂದಣಿಯಾಗುವಂತೆ ಕ್ರಮ ಕೈಗೊಳ್ಳುವುದು. ವಿಶೇಷ ನೋಂದಣಿ ಅಭಿಯಾನದ ಕುರಿತು ಸಾರ್ವಜನಿಕರಿಗೆ ತಿಳುವಳಿಕೆ ನೀಡುವ ಬಗ್ಗೆ ಹೆಚ್ಚಿನ ಪ್ರಚಾರ ಕೈಗೊಳ್ಳುವುದು. ವಿಶೇಷ ನೊಂದಣಿ ಆಂದೋಲನದ ಅನ್ವಯ ಸ್ವೀಕರಿಸಲಾದ ಎಲ್ಲ ನಮೂನೆ-6ರ ವಿವರಗಳನ್ನು ಅದೇ ದಿನ ಸಂಜೆ 6 ಗಂಟೆಯೊಳಗೆ ಈ ಕಚೇರಿಗೆ ತಪ್ಪದೇ ವರದಿ ಮಾಡುವುದು.
ಆಂದೋಲನದ ಅನ್ವಯ ಸ್ವೀಕರಿಸಲಾದ ಎಲ್ಲ ನಮೂನೆಗಳನ್ನು ಬೂತ್ಮಟ್ಟದ ಅಧಿಕಾರಿಯಿಂದ ಪಡೆದು, ಅದನ್ನು ನಿಯಮಾನುಸಾರ ತನಿಖೆ ನಡೆಸಿ, 2018ರ ಡಿ.20 ರೊಳಗಾಗಿ ಸಾಫ್ಟ್ವೇರ್ನಲ್ಲಿ ಅಳವಡಿಸಿ ತಪ್ಪದೇ ಇತ್ಯರ್ಥಪಡಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.