ಮೀ ಟೂ ಪ್ರಕರಣ: ಬಿಸಿಸಿಐ ಸಿಇಒ ದೋಷಮುಕ್ತ

Update: 2018-11-21 17:06 GMT

ಹೊಸದಿಲ್ಲಿ, ನ.21: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಿಇಒ ರಾಹುಲ್ ಜೋಹ್ರಿಯನ್ನು ಮೀ ಟೂ ಆರೋಪದ ಕಳಂಕದಿಂದ ಮುಕ್ತಗೊಳಿಸಿರುವ ಮೂವರು ಸದಸ್ಯರ ತನಿಖಾ ಸಮಿತಿ, ಜೋಹ್ರಿ ವಿರುದ್ಧದ ಆರೋಪ ಕಲ್ಪಿತ ಹಾಗೂ ದುರುದ್ದೇಶ ಪೂರಿತವಾಗಿದೆ ಎಂದು ತಿಳಿಸಿದೆ.

 ಅಲ್ಲದೆ ಕಳೆದ ಮೂರು ವಾರದಿಂದ ಕಡ್ಡಾಯ ರಜೆಯಲ್ಲಿ ತೆರಳಿರುವ ಜೋಹ್ರಿ ತನ್ನ ಕೆಲಸ ಮುಂದುವರಿಸಬಹುದು ಎಂದು ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ. ಸಮಿತಿಯ ವರದಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗುವುದು.

ಜೋಹ್ರಿ ಈ ಹಿಂದೆ ಉದ್ಯೋಗಿಯಾಗಿದ್ದ ಸ್ಥಳದಲ್ಲಿ ತಾನು ಅವರ ಸಹೋದ್ಯೋಗಿಯಾಗಿದ್ದೆ ಎಂದು ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದ ಅನಾಮಧೇಯ ವ್ಯಕ್ತಿಯೊಬ್ಬರು, ಆಗ ಜೋಹ್ರಿ ತನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಇ-ಮೇಲ್ ಮೂಲಕ ದೂರು ನೀಡಿದ್ದರು. ಬಳಿಕ ಈ ಇ-ಮೇಲ್ ದೂರನ್ನು ಅಳಿಸಲಾಗಿತ್ತು.

ಇದಾದ ಬಳಿಕ ಇನ್ನೆರಡು ದೂರು ಕೇಳಿಬಂದಿತ್ತು. ಸಿಂಗಾಪುರ ಮೂಲದ ಪತ್ರಕತೆರ್ಯೊಬ್ಬರು ಹಾಗೂ ಜೋಹ್ರಿಯೊಂದಿಗೆ ಈ ಹಿಂದಿನ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ್ದ ಮಹಿಳೆಯೊಬ್ಬರು ದೂರು ನೀಡಿದ್ದರು. ಇವರನ್ನು ಸ್ಕೈಪ್ ಮೂಲಕ ವೀಡಿಯೊ ಸಂವಾದ ನಡೆಸಿ ತನಿಖಾ ಸಂಸ್ಥೆ ವಿಚಾರಣೆಗೊಳಪಡಿಸಿತ್ತು.

ಕ್ರಿಕೆಟ್ ಆಡಳಿತ ಸಮಿತಿ(ಸಿಒಎ) ನಿವೃತ್ತ ನ್ಯಾಯಾಧೀಶ ರಾಕೇಶ್ ಶರ್ಮ ನೇತೃತ್ವದಲ್ಲಿ ರಚಿಸಿರುವ ತನಿಖಾ ಸಮಿತಿಯಲ್ಲಿ ದಿಲ್ಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಬರ್ಖಾ ಸಿಂಗ್, ವಕೀಲೆ ಮತ್ತು ಸಾಮಾಜಿಕ ಕಾರ್ಯಕರ್ತೆ ವೀಣಾ ಗೌಡ ಸದಸ್ಯೆಯಾಗಿದ್ದಾರೆ.

ದೂರುದಾರರಲ್ಲಿ ಒಬ್ಬರ ಜೊತೆ ಬರ್ಮಿಂಗ್ಹಾಮ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಸಂದರ್ಭ ಜೋಹ್ರಿ ಅನುಚಿತವಾಗಿ ವರ್ತಿಸಿದ್ದರು ಎಂಬ ದೂರಿನ ಹಿನ್ನೆಲೆಯಲ್ಲಿ ಜೋಹ್ರಿಯನ್ನು ಲಿಂಗ ಸಂವೇದನೆಯ ಆಪ್ತ ಸಮಾಲೋಚನೆಗೆ ಒಳಪಡಿಸಬೇಕು ಎಂದು ವೀಣಾ ಗೌಡ ಒತ್ತಾಯಿಸಿದ್ದರು.

 ಈ ಮಧ್ಯೆ, ಸಮಿತಿಯ ವರದಿಯನ್ನು ಬುಧವಾರ ಪ್ರಕಟಿಸಬಾರದು. ಈ ವರದಿಯನ್ನು ಅಧ್ಯಯನ ನಡೆಸಲು ಕೆಲ ದಿನ ಬೇಕಾಗುತ್ತದೆ ಎಂದು ಸಿಒಎ ಸದಸ್ಯೆ ಡಯಾನ ಎಡುಲ್ಜಿ ಹೇಳಿದರು. ಇದಕ್ಕೆ ಸಿಒಎ ಒಪ್ಪಲಿಲ್ಲ.

ತನಿಖಾ ಸಮಿತಿಯ ಅಗತ್ಯವಿಲ್ಲ. ಜೋಹ್ರಿಯನ್ನು ತಕ್ಷಣವೇ ವಜಾಗೊಳಿಸಬೇಕು ಎಂದು ಈ ಹಿಂದೆ ಡಯಾನಾ ವಾದಿಸಿದ್ದರು. ಆದರೆ ಸಾಮಾಜಿಕ ನ್ಯಾಯದ ಆಧಾರದಲ್ಲಿ ತನಿಖೆಗೆ ಆದೇಶಿಸುವುದಾಗಿ ಸಿಒಎ ಅಧ್ಯಕ್ಷ ವಿನೋದ್ ರಾಯ್ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News